ಇತ್ತೀಚಿನ ಸುದ್ದಿ
ಮಂಗಳೂರು: ಬೆಂಗ್ರೆ ತೀರ ‘ತ್ಯಾಜ್ಯ ಆಗರ’!; ಬೋಟ್ ನಿರ್ಮಾಣ ಕೇಂದ್ರ ಬೇಜವಾಬ್ದಾರಿಗೆ ‘ಕಡಲು ಕಂಗಾಲು’
23/08/2026, 15:31
ಮನೋಜ್ ಕೆ.ಬೆಂಗ್ರೆ, ಮಂಗಳೂರು
info.reporterkarnataka@gmail.com
ಮಂಗಳೂರಿನ ಸುಂದರ ಕರಾವಳಿ ತೀರಗಳಲ್ಲಿ ಒಂದಾದ ಬೆಂಗ್ರೆ ಸಮುದ್ರತೀರವಿಂದು ತ್ಯಾಜ್ಯದ ತೊಟ್ಟಿಯಾಗಿ ಮಾರ್ಪಡುತ್ತಿದೆ. ಸುಂದರ ಅಲೆಗಳನ್ನು ಆಸ್ವಾದಿಸಬೇಕಾದ ಜಾಗದಲ್ಲಿ ಥರ್ಮಾಕೋಲ್, ಪ್ಲಾಸ್ಟಿಕ್ ಮತ್ತು ದೋಣಿ, ಬೋಟ್ ನಿರ್ಮಾಣ, ರಿಪೇರಿಗೆ ಬಳಸುವ ಅಪಾಯಕಾರಿ ತ್ಯಾಜ್ಯಗಳು ರಾಶಿ ಬಿದ್ದಿದ್ದು, ಕಡಲತೀರದ ಪರಿಸರ ವ್ಯವಸ್ಥೆಗೆ ಕಂಟಕವಾಗಿ ಪರಿಣಮಿಸಿದೆ.
*ಬೋಟ್ ನಿರ್ಮಾಣ ಕೇಂದ್ರಗಳತ್ತ ಬೆರಳು:*
ಸ್ಥಳೀಯರ ಆರೋಪದಂತೆ, ಕೆಲವು ಬೋಟ್ ನಿರ್ಮಾಣ ಕೇಂದ್ರಗಳಿಂದ (Boat Building Yards) ಅನಿಯಂತ್ರಿತವಾಗಿ ತ್ಯಾಜ್ಯ ಹೊರಬರುತ್ತಿದೆ. ಬೋಟ್ ಗಳಿಗೆ ಇನ್ಸುಲೇಶನ್ ಮತ್ತು ನಿರ್ಮಾಣಕ್ಕಾಗಿ ಬಳಸುವ ಥರ್ಮಾಕೋಲ್ ಚೂರುಗಳು, ಫೈಬರ್ ತ್ಯಾಜ್ಯ ಹಾಗೂ ರಾಸಾಯನಿಕ ಲೇಪಿತ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ನೇರವಾಗಿ ನದಿಗೆ ಚೆಲ್ಲಲಾಗುತ್ತಿದ್ದು, ಸಮುದ್ರ ಸೇರುತ್ತಿದೆ.
*ಜಲಚರಗಳಿಗೆ ಕಂಟಕ, ಮೀನುಗಾರರಿಗೆ ಸಂಕಷ್ಟ:*
ಸಮುದ್ರಕ್ಕೆ ಸೇರುವ ಥರ್ಮಾಕೋಲ್ ಸಣ್ಣ ಸಣ್ಣ ಚೂರುಗಳಾಗಿ ಒಡೆದು ಜಲಚರಗಳ ಹೊಟ್ಟೆ ಸೇರುತ್ತಿದ್ದು, ಮೀನುಗಳ ಸಂತತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಗಾಳಿ ಮತ್ತು ಅಲೆಗಳ ಹೊಡೆತಕ್ಕೆ ಈ ಥರ್ಮಾಕೋಲ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಇಡೀ ತೀರವನ್ನು ಆವರಿಸಿಕೊಂಡಿವೆ!
ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಕಲುಷಿತಗೊಳ್ಳುತ್ತಿರುವ ತೀರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ತಕ್ಷಣವೇ ಮಧ್ಯ ಪ್ರವೇಶಿಸಬೇಕಿದೆ. ನಿಯಮ ಉಲ್ಲಂಘಿಸುವ ದೋಣಿ, ಬೋಟ್ ನಿರ್ಮಾಣ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತೀರವನ್ನು ತಕ್ಷಣವೇ ಸ್ವಚ್ಛಗೊಳಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.












