ಇತ್ತೀಚಿನ ಸುದ್ದಿ
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ
20/08/2026, 22:34
ಉಡುಪಿ(reporterkarnataka.com): ಕೃತಕ ರಾಸಾಯನಿಕ ಬಳಸಿ ಬಾಳೆಗೊನೆಗಳನ್ನು ಹಣ್ಣು ಮಾಡುವ ಇಲ್ಲಿಗೆ ಸಮೀಪದ ಅಲೆವೂರಿನ ಗೋದಾಮಿಗೆ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಬಾಳೆ ಗೊನೆಗಳನ್ನು ಕೃತಕವಾಗಿ ಹಣ್ಣಾಗಿಸಲು ಹಾಗೂ ಆಕರ್ಷಕ ಬಣ್ಣ ನೀಡಲು ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಉಡುಪಿ ಸಮೀಪದ ಅಲೆವೂರು ಗ್ರಾಮದ ವಿವಿಧ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಗುರುವಾರ ಅಧಿಕಾರಿಗಳು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.






ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಕೆಸ್ತೂರು ಮತ್ತು ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿರುವ ಬಾಳೆಹಣ್ಣಿನ ರಖಂ ವ್ಯಾಪಾರಸ್ಥರು ಹಾಗೂ ದಾಸ್ತಾನುದಾರರ ಗೋದಾಮುಗಳ ಮೇಲೆ ದಾಳಿ ನಡೆಸಲಾಯಿತು. ದಾಳಿ ವೇಳೆ ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುತ್ತಿದ್ದ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡಲು ಬಳಸುತ್ತಿದ್ದ ರಾಸಾಯನಿಕಗಳು ಹಾಗೂ ಅವುಗಳನ್ನು ಬಾಳೆಹಣ್ಣಿಗೆ ಅನ್ವಯಿಸಲು ಬಳಸುತ್ತಿದ್ದ ವಿವಿಧ ಪರಿಕರಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಅಧಿಕಾರಿಗಳು ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ ಬಾಳೆಹಣ್ಣುಗಳ ಪರಿಶೀಲನೆ ನಡೆಸಿ, ಅವುಗಳ ಹಣ್ಣಾಗುವಿಕೆ ಹಾಗೂ ಬಣ್ಣಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತಿದ್ದ ವಸ್ತುಗಳ ಮಾದರಿಗಳನ್ನು ಪರಿಶೀಲಿಸಿದ್ದಾರೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ರಾಸಾಯನಿಕಗಳ ಬಳಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಸ್ಥಳದಲ್ಲಿದ್ದ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಅಕ್ರಮವಾಗಿ ಅಥವಾ ನಿಯಮಬಾಹಿರವಾಗಿ ರಾಸಾಯನಿಕ ಬಳಕೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗುತ್ತಿತ್ತು ಎನ್ನಲಾದ ವಾಹನಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಾಳೆಹಣ್ಣು ಸೇರಿದಂತೆ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಬದಲು ರಾಸಾಯನಿಕಗಳ ಮೂಲಕ ಕೃತಕವಾಗಿ ಹಣ್ಣಾಗಿಸುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಇಂತಹ ರಾಸಾಯನಿಕಗಳ ಬಳಕೆಯಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಲೆವೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಈ ದಾಳಿಯಿಂದ ಬಾಳೆಹಣ್ಣು ವ್ಯಾಪಾರಿಗಳಲ್ಲಿ ಆತಂಕ ಮೂಡಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ದಿಢೀರ್ ತಪಾಸಣೆಗಳು ಮುಂದುವರಿಯುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಹಣ್ಣುಗಳು ದೊರೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.












