ಇತ್ತೀಚಿನ ಸುದ್ದಿ
ಪ್ರಧಾನಿ ತವರಿನಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು: 5 ಮಂದಿ ಶಂಕಿತ ಉಗ್ರರ ಸೆರೆ
19/07/2026, 16:57
ನವದೆಹಲಿ(reporterkarnataka.com):ಗುಜರಾತ್ನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದನಾ ಸಂಘಟನೆ ‘ಜೈಶ್-ಎ-ಮೊಹಮ್ಮದ್’ (JEM) ನುಸುಳುಕೋರರ ದೊಡ್ಡ ಜಾಲವನ್ನು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಯಶಸ್ವಿಯಾಗಿ ಭೇದಿಸಿದೆ. ಇತ್ತೀಚಿನ ಕಾರ್ಯಾಚರಣೆಯಲ್ಲಿ ಮತ್ತೈದು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಜುಲೈ ಮೊದಲ ವಾರದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದ ವಿವಿಧೆಡೆ ದಾಳಿ ನಡೆಸಿ ಎಂಟು ಜನರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆಯಿಂದ ಸಿಕ್ಕ ಮಹತ್ವದ ಸುಳಿವುಗಳ ಆಧಾರದ ಮೇಲೆ ಈಗ ಬಿಲಾಲ್ ಅಬಿದ್ಭಾಯ್ ಶೇರಾ, ಮೊಹಮ್ಮದ್ ಆಯೂಬ್ ಸೇರಿದಂತೆ ಒಟ್ಟು ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲರೂ ಕೇವಲ 20 ರಿಂದ 24 ವರ್ಷದೊಳಗಿನ ಯುವಕರಾಗಿದ್ದು, ಸ್ಥಳೀಯವಾಗಿಯೇ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*ಮಸೀದಿಗಳಲ್ಲೇ ನಡೆಯುತ್ತಿತ್ತು ರಹಸ್ಯ ಸಭೆ, ಬ್ರೈನ್ ವಾಶ್!*
ಬಂಧಿತ ಉಗ್ರರು ಕಳೆದ ಕೆಲವು ವರ್ಷಗಳಿಂದ ತೀವ್ರಗಾಮಿ ಸಿದ್ಧಾಂತಕ್ಕೆ ಒಳಗಾಗಿದ್ದರು ಎನ್ನುವ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಜೈಶ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನ ದ್ವೇಷಪೂರಿತ ಭಾಷಣಗಳು, ವೀಡಿಯೊಗಳು ಮತ್ತು ಸಾಹಿತ್ಯ ಒಳಗೊಂಡಿದ್ದ ಪೆನ್ ಡ್ರೈವ್ಗಳನ್ನು ಬಳಸಿ ಇತರೆ ಯುವಕರನ್ನು ಜಾಲಕ್ಕೆ ಸೆಳೆಯಲಾಗುತ್ತಿತ್ತು. ಕೆಲವು ಮಸೀದಿಗಳ ಒಳಗೆ ರಹಸ್ಯ ಸಭೆಗಳನ್ನು ನಡೆಸಿ, ಯುವಕರಿಗೆ ದೇಶದ ವಿರುದ್ಧ ಜಿಹಾದ್ ನಡೆಸುವಂತೆ ಪ್ರಚೋದನೆ ನೀಡಲಾಗುತ್ತಿತ್ತು ಮತ್ತು ಐಇಡಿ ಬಾಂಬ್ ತಯಾರಿಸುವ ತರಬೇತಿ ನೀಡಲಾಗುತ್ತಿತ್ತು ಎಂದು ಎಟಿಎಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.ಯೂಟ್ಯೂಬ್, ಗೂಗಲ್ ನೋಡಿ ಬಾಂಬ್ ತಯಾರಿಕೆ ತರಬೇತಿ!
ಈ ಜಾಲದ ಸದಸ್ಯರು ಕೇವಲ ಸಿದ್ಧಾಂತಕ್ಕೆ ಸೀಮಿತವಾಗಿರದೆ, ಪ್ರಾಯೋಗಿಕವಾಗಿ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದರು. ‘ಒಬ್ಬಂಟಿ ಮುಜಾಹಿದ್ ಹೇಗೆ ಜಿಹಾದ್ ಮಾಡಬೇಕು’ ಎಂಬ ಉರ್ದು ಪುಸ್ತಕಗಳು ಮತ್ತು ಆನ್ಲೈನ್ ಮಾಹಿತಿಯನ್ನು ಬಳಸಿಕೊಂಡು 2023 ರಿಂದಲೇ ಇವರು ಬಾಂಬ್ ತಯಾರಿಕೆ ತಂತ್ರಗಳನ್ನು ಕಲಿಯುತ್ತಿದ್ದರು. ಆನ್ಲೈನ್ ಮಾರುಕಟ್ಟೆಗಳು ಮತ್ತು ಸ್ಥಳೀಯ ಅಂಗಡಿಗಳಿಂದಲೇ ಗನ್ಪೌಡರ್ ಹಾಗೂ ಸ್ಫೋಟಕಗಳಿಗೆ ಬೇಕಾಗುವ ರಾಸಾಯನಿಕಗಳನ್ನು ಇವರು ಖರೀದಿಸುತ್ತಿದ್ದರು.
*ಎಂಟು ಬಾರಿ ಬಾಂಬ್ ಸ್ಫೋಟದ ಪರೀಕ್ಷೆ!*
ತನಿಖಾ ಸಂಸ್ಥೆಗಳ ಪ್ರಕಾರ, ಈ ಉಗ್ರರು ಕೇವಲ ಸಂಚು ರೂಪಿಸುತ್ತಿರಲಿಲ್ಲ, ಬದಲಿಗೆ ತಾವು ತಯಾರಿಸಿದ ಬಾಂಬುಗಳು ಸರಿಯಾಗಿ ಕೆಲಸ ಮಾಡುತ್ತವೆಯೇ ಎಂದು ಪರೀಕ್ಷಿಸಲು ಕಳೆದೆರಡು ವರ್ಷಗಳಲ್ಲಿ ಬರೋಬ್ಬರಿ ಎಂಟು ಬಾರಿ ಜನರಿಲ್ಲದ ಪ್ರದೇಶಗಳಲ್ಲಿ ಪ್ರಾಯೋಗಿಕ ಸ್ಫೋಟಗಳನ್ನು ನಡೆಸಿದ್ದರು. ಅದರಲ್ಲಿ ಕನಿಷ್ಠ ಎರಡು ಬಾರಿ ಬಾಂಬ್ಗಳು ಯಶಸ್ವಿಯಾಗಿ ಸ್ಫೋಟಗೊಂಡಿದ್ದವು. ದೊಡ್ಡ ಮಟ್ಟದ ದಾಳಿ ನಡೆಸುವ ಮುನ್ನವೇ ಎಟಿಎಸ್ ಇವರನ್ನು ಹೆಡೆಮುರಿ ಕಟ್ಟಿದೆ.












