ಇತ್ತೀಚಿನ ಸುದ್ದಿ
Mangaluru | ಪಾದುವಾ ಪದವಿಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಆಚರಣೆ
18/07/2026, 23:01
ಮಂಗಳೂರು(reporterkarantaka.com): ನಗರದ ಪಾದುವಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಕೋ ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಹಾಗೂ ಮರಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪರಿಸರವಾದಿ, ವೃಕ್ಷಪ್ರೇಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಪಿ. ಕೃಷ್ಣಪ್ಪ ಸಸಿ ನೆಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಪರಿಸರ ಸಂರಕ್ಷಣೆ ಮತ್ತು ಮರಗಳ ರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.
ಮರಗಳು ಜೀವಜಗತ್ತಿಗೆ ಅತ್ಯಂತ ಅವಶ್ಯಕವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
“ಮರ ಉಳಿಸಿ, ಜೀವ ಉಳಿಸಿ” ಎಂಬ ಸಂದೇಶವನ್ನು ನೀಡಿದ ಅವರು, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವಂತೆ ಪ್ರೇರೇಪಿಸಿದರು. ಅಲ್ಲದೆ, “ನಿಮ್ಮ ಹುಟ್ಟುಹಬ್ಬದಂದು ಒಂದು ಸಸಿ ನೆಡಿ” ಎಂಬ ಸಂದೇಶದ ಮೂಲಕ ಪರಿಸರದ ಮೇಲಿನ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಯ ಸಂದೇಶದ ಜೊತೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ವಿವಿಧ ಘೋಷಣೆಗಳನ್ನು ಉತ್ಸಾಹದಿಂದ ಕೂಗಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೋಶನ್ ವಿನ್ಸಿ ಸಂತು ಮಾಯರ್ ಅವರು ಪಾದುವಾ ಪದವಿಪೂರ್ವ ಕಾಲೇಜಿನ ಪ್ರತಿಯೊಬ್ಬರೂ ಭಾನುವಾರ ದಂದು ಬೆಳಿಗ್ಗೆ 11:00 ಗಂಟೆಗೆ ಒಂದು ಸಸಿಯನ್ನು ನೆಡುವಂತೆ ಕರೆ ನೀಡಿದರು.

ನಾವು ನೆಡುವ ಪ್ರತಿಯೊಂದು ಸಸಿಯೂ ಹಸಿರು, ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯದತ್ತ ಇಡುವ ಮಹತ್ವದ ಹೆಜ್ಜೆಯಾಗಿದೆ. ಸ್ವಚ್ಛ ಹಾಗೂ ಹಸಿರು ಪರಿಸರ ನಿರ್ಮಾಣದಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್ ಎಸ್ ಯೋಜನಾಧಿಕಾರಿ ಯತಿರಾಜ್, ಸಹ ಯೋಜನಾಧಿಕಾರಿ ಅನಿಲ್ ಡಿ’ಮೆಲ್ಲೋ, ಉಪನ್ಯಾಸಕರು ಗಳಾದ ಡಾ.ರಾಮ್ ಪ್ರಸಾದ್, ರಾಜ್ ಕಿಶನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಬಸಮ್ಮ ಸ್ವಾಗತಿಸಿದರು. ಆಶಾ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿ ಶ್ಯಾರನ್ ಕಾರ್ಯಕ್ರಮವನ್ನು ನಿರೂಪಿಸಿದರು.












