ಇತ್ತೀಚಿನ ಸುದ್ದಿ
ಆನ್ಲೈನ್ ಗೇಮಿಂಗ್ ಚಟಕ್ಕೆ ನರ್ಸಿಂಗ್ ವಿದ್ಯಾರ್ಥಿ ಬಲಿ: ಮೂರು ದಿನಗಳ ಬಳಿಕ ಶವ ಪತ್ತೆ
19/07/2026, 12:46
ಬೆಂಗಳೂರು(reporter Karnataka.com): ಆನ್ಲೈನ್ ಗೇಮಿಂಗ್ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ನರ್ಸಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಕೇಡಿಸುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಮಾರಪ್ಪನಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಆತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
,*ಕೊಠಡಿಯಿಂದ ಬಂದ ದುರ್ವಾಸನೆ:*
20 ವರ್ಷದ ಉದಯ್ ಮೃತಪಟ್ಟ ದುರ್ದೈವಿ. ಈತ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ. ಓದಿನ ಜೊತೆಗೆ ಆರ್ಥಿಕ ನೆರವಿಗಾಗಿ ಬಾಟಾ ಶೋರೂಂನಲ್ಲೂ ಪಾರ್ಟ್ ಟೈಂ ಕೆಲಸ ನಿರ್ವಹಿಸುತ್ತಿದ್ದ. ಉದಯ್ ಓದಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪೋಷಕರಾದ ಸುರೇಶ್ ಹಾಗೂ ಪ್ರೇಮಲತಾ ದಂಪತಿ ಮನೆಯ ಮೇಲ್ಭಾಗದಲ್ಲಿ ಆತನಿಗೆ ಪ್ರತ್ಯೇಕ ಕೊಠಡಿಯೊಂದನ್ನು ಕಟ್ಟಿಸಿಕೊಟ್ಟಿದ್ದರು.ಅದೇ ಕೊಠಡಿಯಲ್ಲೇ ಉದಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಆತ ಪ್ರತ್ಯೇಕ ರೂಮಿನಲ್ಲಿದ್ದ ಕಾರಣ ಮೂರು ದಿನಗಳ ಕಾಲ ಈ ಘಟನೆ ಕುಟುಂಬಸ್ಥರ ಗಮನಕ್ಕೆ ಬಂದಿರಲಿಲ್ಲ. ಶನಿವಾರ ಕೊಠಡಿಯ ಸುತ್ತಮುತ್ತ ತೀವ್ರ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಪೋಷಕರು ಹಾಗೂ ಕುಟುಂಬಸ್ಥರು ಅನುಮಾನಗೊಂಡು ಕೊಠಡಿ ಪರಿಶೀಲಿಸಿದಾಗ ಉದಯ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
*ಆನ್ಲೈನ್ ಗೇಮ್ ಶಂಕೆ?:*
ಮೃತ ಉದಯ್ ತೀವ್ರ ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.












