ಇತ್ತೀಚಿನ ಸುದ್ದಿ
ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿ
24/08/2026, 07:57
ಬೆಂಗಳೂರು(reporterkarnataka.com):‘ಸಚಿವನಾಗಿರುವ ಬಾಲಕೃಷ್ಣ ಹಿಂದೆ ನನ್ನ ಜೊತೆಯಲ್ಲೇ ಇದ್ದ. ಆಗ ಗುತ್ತಿಗೆದಾರರೊಬ್ಬರು ₹600 ಕೋಟಿ ಕೆಲಸ ಮಾಡಿದರೂ ಹಣ ಸಿಗದಿದ್ದಾಗ, ಅಯ್ಯಯ್ಯೋ ಆ ವಿಷಯ ಎತ್ತಬೇಡಣ್ಣ ಎಂದು ಕಾಲು ಹಿಡಿದುಕೊಳ್ಳಲು ಬಂದಿದ್ದ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧ ಕಿಡಿಕಾರಿದರು. ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಬಾಲಕೃಷ್ಣ ವಿರುದ್ಧ ತಾಲ್ಲೂಕಿನ ಅಕ್ಕೂರಿನಲ್ಲಿ ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘₹600 ಕೋಟಿ ವಿಚಾರ ಎತ್ತಬೇಡ ಎಂದು ಆಗ ಕಾಲು ಹಿಡಿದಿದ್ದವನು ಈಗ ನನಗೆ ಪಾಠ ಮಾಡುತ್ತಾನಾ? ಇವನಿಂದ ನಾನು ಕಲಿಯಬೇಕಾ? ಎಂದರು.
*ಸೂಟ್ಕೇಸ್ ಬೃಂದಾವನ:*
‘ಇಬ್ಬರು ಮಹಾನ್ ನಾಯಕರು ಹಾಗೂ ಅಭಿವೃದ್ಧಿಯ ಹರಿಕಾರರು ನನ್ನ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂದಿದ್ದಾರೆ. ಹೌದು. ನಾವು ಪೂಜಿಸುವುದು ಸಂಸ್ಕೃತಿಯ ಪ್ರತೀಕವಾದ ಬೃಂದಾವನವನ್ನು. ಆದರೆ ಅವರದ್ದು ಸೂಟ್ಕೇಸ್ ಬೃಂದಾವನ. ಎಲ್ಲಿ ಭೂಮಿ ಸಿಗುತ್ತದೊ ಅಲ್ಲೆಲ್ಲ ಲಪಟಾಯಿಸಿ ಬೃಂದಾವನ ಕಟ್ಟುವುದು ಅವರ ಸಂಸ್ಕೃತಿ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮತ್ತು ಸಚಿವ ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.
‘ಎಚ್ಡಿಕೆ ಪಾಪದ ಕೊಳೆ ತೊಳೆಯುತ್ತಿದ್ದೇವೆ’ ಎಂಬ ಸುರೇಶ್ ಹೇಳಿಕೆಗೆ, ‘ಕೊಳೆನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ದೀಪದ ಕಂಬ ಕೂಡ ಇರಲಿಲ್ಲ. ಎಚ್.ಡಿ. ದೇವೇಗೌಡ ಅವರು ಕನಕಪುರಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವಾಗ ಇವರು ಎಲ್ಲಿದ್ದರು? ಕೊತ್ವಾಲ್ಗೆ ಹೆಂಡ ಕೊಡಲು ಬಾರ್ನಲ್ಲಿ ಕೂತಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.












