ಇತ್ತೀಚಿನ ಸುದ್ದಿ
ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ
22/08/2026, 18:09
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ಎರಡು ದಿನಗಳ ಹಿಂದೆ ರಾತ್ರಿ ಪುತ್ರನೊಂದಿಗೆ ಮಲಗಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತೋಟದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಪರಂಬು ಪೈಸಾರಿಯಲ್ಲಿ ನಡೆದಿದೆ.
ಮೃತರನ್ನು ಪರಂಬು ಪೈಸಾರಿ ನಿವಾಸಿ ದಿವಂಗತ ವೈ. ಮೇದು ಅವರ ಪುತ್ರ ವೈ.ಎಂ. ಉಮೇಶ್ (44) ಎಂದು ಗುರುತಿಸಲಾಗಿದೆ. ತೋಟದ ಕಾರ್ಮಿಕರಾಗಿದ್ದ ಉಮೇಶ್ ಅವರ ಪತ್ನಿ ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಪುತ್ರನೊಂದಿಗೆ ವಾಸಿಸುತ್ತಿದ್ದ ಉಮೇಶ್ ಆ.17ರಂದು ರಾತ್ರಿ ಪುತ್ರನೊಂದಿಗೆ ಊಟ ಮಾಡಿ ಮಲಗಿದ್ದ ಉಮೇಶ್, ಮರುದಿನ ಬೆಳಗ್ಗೆ ಪುತ್ರ ಎಚ್ಚರಗೊಳ್ಳುವ ಮುನ್ನ ಮನೆಯಿಂದ ಹೊರಹೋಗಿದವರು ನಾಪತ್ತೆ ಯಾಗಿದ್ದರು.ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ಆ.18ರ ರಾತ್ರಿ ವರೆಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮೃತರ ಸಂಬಂಧಿ ಜೂಬಿ ಅವರು ಆ.19ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇಂದು ಮುಂಜಾನೆ ಪರಂಬು ಪೈಸಾರಿ ನಿವಾಸಿ ಪ್ರಕಾಶ್ ಅವರ ತೋಟದ ತೆರೆದ ಬಾವಿಯಲ್ಲಿ ಉಮೇಶ್ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.













