ಇತ್ತೀಚಿನ ಸುದ್ದಿ
ಪ್ರಜ್ವಲ್ ರೇವಣ್ಣ ಮೊಬೈಲ್ ಕಾಲ್ ಡೀಟೇಲ್ಸ್ ಬಹಿರಂಗ: ಪರಪ್ಪನ ಅಗ್ರಹಾರದಿಂದ ಅತೀ ಹೆಚ್ಚು ಕಾಲ್ ಮಾಡಿದ್ದು ಯಾರಿಗೆ?
21/08/2026, 17:08
ಬೆಂಗಳೂರು(reporterkarnataka.com): ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಬಳಕೆಯ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ಸಿಸಿಬಿ ದಾಳಿ ವೇಳೆ ಬ್ಯಾರಕ್ನಲ್ಲಿ ಸಿಕ್ಕಿದ್ದ ಆಯಂಡ್ರಾಯ್ಡ್ ಮೊಬೈಲ್ನ ಕರೆ ವಿವರಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಪ್ರಜ್ವಲ್ ಹಲವು ತಿಂಗಳುಗಳಿಂದ ತಂದೆ-ತಾಯಿ ಹಾಗೂ ಆಪ್ತರೊಂದಿಗೆ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
*ಪಾರ್ಸೆಲ್ ಮೂಲಕ ಮೊಬೈಲ್ ಜೈಲು ಪ್ರವೇಶ?:*
ಮೊಬೈಲ್ ಜೈಲಿನೊಳಗೆ ತಲುಪಿದ ಮಾರ್ಗದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜೈಲಿನಲ್ಲಿರುವ ಮತ್ತೊಬ್ಬ ಕೈದಿ ಇನ್ಸ್ಟಾಗ್ರಾಂ ಮೂಲಕ ಡೆಲಿವರಿ ಬಾಯ್ನನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಹೊರಗಿನಿಂದ ವ್ಯಕ್ತಿಯೊಬ್ಬ ನೀಡುವ ಪಾರ್ಸೆಲ್ನ್ನು ಪಡೆದು ತರುವಂತೆ ಆತನಿಗೆ ಸೂಚನೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸೂಚನೆಯಂತೆ ಪಾರ್ಸೆಲ್ ಪಡೆದುಕೊಂಡ ಡೆಲಿವರಿ ಬಾಯ್ ಅದನ್ನು ಅಕ್ರಮ ಮಾರ್ಗದಲ್ಲಿ ಜೈಲಿನೊಳಗೆ ತಲುಪಿಸಿದ್ದಾನೆ ಎಂಬ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
*ಜೈಲಿನಲ್ಲಿ ಮತ್ತಷ್ಟು ನಿಯಮ ಉಲ್ಲಂಘನೆ?:*
ಮೊಬೈಲ್ ಬಳಕೆಯಷ್ಟೇ ಅಲ್ಲದೆ, ಜೈಲಿನ ನಿಯಮಗಳಿಗೆ ವಿರುದ್ಧವಾಗಿ ಪ್ರಜ್ವಲ್ ನಡೆದುಕೊಂಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜೈಲು ಸಮವಸ್ತ್ರ ಧರಿಸದಿರುವುದು, ಸಿಂಗಲ್ ಕಾಟ್ ಬಳಸಿರುವುದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದ ಆರೋಪಗಳೂ ಅಧಿಕಾರಿಗಳ ಗಮನಕ್ಕೆ ಬಂದಿವೆ.
ಇಂತಹ ಸೌಲಭ್ಯಗಳು ಜೈಲಿನೊಳಗೆ ದೊರೆಯಲು ಸಿಬ್ಬಂದಿಯಲ್ಲೇ ಯಾರಾದರೂ ನೆರವು ನೀಡಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೊಬೈಲ್ ಜೈಲಿಗೆ ತಲುಪಿಸಿದ ಜಾಲ, ಸಿಮ್ಗಳ ಮಾಲೀಕರು ಹಾಗೂ ಪ್ರಜ್ವಲ್ಗೆ ನೆರವಾದವರ ಪತ್ತೆಗೆ ತನಿಖೆ ಮುಂದುವರಿದಿದೆ.













