ಇತ್ತೀಚಿನ ಸುದ್ದಿ
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ ಜಿಲ್ಲಾವಾರು ಪ್ರತಿಭಟನೆ
20/06/2026, 23:13
ಮಸ್ಕಿ(reporterkarnataka.com): ರಾಯಚೂರು ಜಿಲ್ಲಾ AIIMS ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಯಚೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದಿಗೆ 1500 ದಿನಗಳನ್ನು ಪೂರ್ಣಗೊಳಿಸಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಂಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ/ತಹಶೀಲ್ದಾರ್ಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಮಸ್ಕಿಯಲ್ಲಿ , ಮಸ್ಕಿ AIIMS ಹೋರಾಟ ಸಮಿತಿಯ ಸದಸ್ಯರಾದ ಶಿವಪ್ರಸಾದ್ ಕ್ಯಾತನಟ್ಟಿ, ವೀರೇಶ್ ಹಿರೇಮಠ, ಅಭಿ ಇತ್ಲಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಬಿ.ಎಲ್. ಶೆಟ್ಟಿ, ಶಿವರಾಜ್ ಇತ್ಲಿ, ಲಕ್ಷ್ಮೀನಾರಾಯಣ ಶೆಟ್ಟಿ, ಆದಯ್ಯ ಸ್ವಾಮಿ ಕ್ಯಾತನಟ್ಟಿ, ಕಿರಣ್ ಸಾನಬಾಳ್, ನೀಲಕಂಠಪ್ಪ ಗೋನ್ವಾರ್, ಅಮರೇಶ್ ಬ್ಯಾಳಿ, ಸಿದ್ದಣ್ಣ ಕಂಕೇರಿ, ನಾಗರಾಜ್ ಕಂಬಾರ್, ಸೋಮಶೇಖರಯ್ಯ ಸಿರವಾರ ಮಠ, ಸಿದ್ದರಾಮ ಗದ್ದಿಮಠ ಮತ್ತು ಮೇಟಿ ಸರ್ ಸೇರಿದಂತೆ AIIMS ಹೋರಾಟ ಸಮಿತಿಯ ಅನೇಕ ಸದಸ್ಯರು ಸೇರಿ ಮಸ್ಕಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿ, ಪ್ರಧಾನಮಂತ್ರಿಯವರ ಗಮನಕ್ಕೆ ತರುವಂತೆ ಕೋರಿದರು.
ಮನವಿಯಲ್ಲಿ, ರಾಯಚೂರು ಜಿಲ್ಲೆಗೆ AIIMS (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮಂಜೂರು ಮಾಡಬೇಕೆಂದು ಆಗ್ರಹಿಸಲಾಯಿತು. ಆರ್ಟಿಕಲ್ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿರುವ ಮತ್ತು ಕೇಂದ್ರ ಸರ್ಕಾರದಿಂದ “ಆಕಾಂಕ್ಷಿತ ಜಿಲ್ಲೆ” ಎಂದು ಗುರುತಿಸಲ್ಪಟ್ಟಿರುವ ರಾಯಚೂರು, ದೇಶದಲ್ಲೇ ಅಪೌಷ್ಟಿಕತೆ ಮತ್ತು ತಾಯಿ-ಮಗು ಮರಣ ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದರೂ, ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ ಎಂದು ಸಂಘಟಕರು ತಿಳಿಸಿದರು.
ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿಗೆ IIT ಸ್ಥಾಪಿಸುವ ಶಿಫಾರಸು ಇದ್ದರೂ, 2012ರಲ್ಲಿ ಅದು ಧಾರವಾಡಕ್ಕೆ ವರ್ಗಾವಣೆಯಾದ ಐತಿಹಾಸಿಕ ಅನ್ಯಾಯವನ್ನು ಸಂಘಟಕರು ಪ್ರಸ್ತಾಪಿಸಿ, ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮಾನತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣಾ-ತುಂಗಭದ್ರಾ ನದಿಗಳ ಸಮೃದ್ಧ ಜಲಸಂಪತ್ತು, ಹಟ್ಟಿ ಚಿನ್ನದ ಗಣಿ, ಎರಡು ವಿಶ್ವವಿದ್ಯಾಲಯಗಳು, ಎರಡು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಹಲವು ಸಂಪನ್ಮೂಲಗಳಿದ್ದರೂ ರಾಯಚೂರು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ವಿಪರ್ಯಾಸ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ತಕ್ಷಣ ಮಧ್ಯಪ್ರವೇಶಿಸಿ ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ಒತ್ತಾಯಿಸಿದೆ.












