ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ ಮೇಲುಗೈ
18/06/2026, 21:29
ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಫಲ ನೀಡಿದ್ದು, ಕಾಂಗ್ರೆಸ್ ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲು ಅವಕಾಶವಿತ್ತು. 7ನೇ ಅಭ್ಯರ್ಥಿ ಬಗ್ಗೆ ಭಾರೀ ಕುತೂಹಲಗಳಿದ್ದವು. 18 ಶಾಸಕರನ್ನು ಹೊಂದಿರುವ ಜೆಡಿಎಸ್, ಬಿಜೆಪಿಯಿಂದ ಹೆಚ್ಚುವರಿಯಾಗಿ ದೊರೆಯುವ 6 ಮತಗಳನ್ನು ಲೆಕ್ಕಕ್ಕಿಟ್ಟುಕೊಂಡು, ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋವಿಂದರಾಜು ಅವರನ್ನು ಕಣಕ್ಕಿಳಿಸಿತ್ತು.
*MLC ಚುನಾವಣಾ ಫಲಿತಾಂಶ : ಗೆದ್ದ ಅಭ್ಯರ್ಥಿಗಳು*
ಕಾಂಗ್ರೆಸ್
ವಿನಯ್ ಕಾರ್ತಿಕ್ 32
ಹರಿಪ್ರಸಾದ್ 30
ತಿಪಣ್ಣಪ್ಪ ಕಮಕನೂರು 30
ಶಿವಣ್ಣ ಮಳವಳ್ಳಿ 30
ಪಿ.ವಿ.ಮೋಹನ್ 29
ಬಿಜೆಪಿ
ರಘು ಕೌಟಿಲ್ಯ 29
ಲಿಂಗರಾಜ ಪಾಟೀಲ 27
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತ ಬಿದಿದ್ದು, ಒಂದು ಮತ ಅಮಾನ್ಯಗೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ನ 3 ಶಾಸಕರ ಅಡ್ಡ ಮತದಾನ ಮಾಡಿದ್ದಾರೆ.
ಕಾಂಗ್ರೆಸ್ ತನ್ನ ಪಕ್ಷದ 4 ಅಭ್ಯರ್ಥಿಗಳಿಗೆ ತಲಾ 30 ಮತಗಳಂತೆ ಹಂಚಿಕೆ ಮಾಡಿತ್ತು. ಒಟ್ಟು 135 ಶಾಸಕರಲ್ಲಿ 4 ಅಭ್ಯರ್ಥಿಗಳಿಗೆ 120 ಮತಗಳು ಹಂಚಿಕೆಯಾಗಿದ್ದು, ಹೆಚ್ಚುವರಿಯಾಗಿ ಉಳಿಯುವ 15 ಮತಗಳನ್ನು ವ್ಯರ್ಥಗೊಳ್ಳಬಾರದು ಎಂಬ ಕಾರಣಕ್ಕೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜೊತೆಗೆ 135 ಶಾಸಕರಿಂದಲೂ 2ನೇ ಪ್ರಾಶಸ್ತ್ಯದ ಮತಗಳನ್ನು 5ನೇ ಅಭ್ಯರ್ಥಿಗೆ ಹಾಕುವಂತೆ ಸೂಚಿಸಲಾಗಿದ್ದು, ಇದು 4:1ರ ಅನುಪಾತದಲ್ಲಿ 33 ಮತಗಳಾಗುವ ಅಂದಾಜಿದೆ. ನಿರೀಕ್ಷೆಯಂತೆ ನಡೆದರೆ ವಿನಯ್ ಕಾರ್ತಿಕ ಗೆಲುವು ಸುಲಭ ಸಾಧ್ಯವಾಗಲಿದೆ.
ಬಿಜೆಪಿ 62 ಶಾಸಕರನ್ನು ಹೊಂದಿದ್ದು, ತನ್ನಿಬ್ಬರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ತಲಾ 28 ಮತಗಳ ಬದಲಾಗಿ 30 ಮತಗಳನ್ನು ಹಂಚಿಕೆ ಮಾಡಿದೆ ಎಂದು ಹೇಳಲಾಗಿದೆ. 28 ಮತಗಳನ್ನು ಹಂಚಿಕೆ ಮಾಡಿದರೆ, ಬಿಜೆಪಿಯಿಂದ, ಜೆಡಿಎಸ್ ಅಭ್ಯರ್ಥಿಗೆ 6 ಹೆಚ್ಚುವರಿ ಮತಗಳು ಉಳಿಯುತ್ತಿದ್ದವು. 30 ಮತಗಳು ಹಂಚಿಕೆಯಾಗಿರುವುದರಿಂದಾಗಿ 2 ಮತಗಳು ಮಾತ್ರ ಉಳಿದಂತಾಗಿದೆ. ಬಿಜೆಪಿಯ ಉಚ್ಛಾಟಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರುಗಳಲ್ಲಿ, ಯತ್ನಾಳ್ ತಾವು ಬಿಜೆಪಿಯ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಇಬ್ಬರು ತಮನ್ನು ಜೆಡಿಎಸ್-ಬಿಜೆಪಿಯ ಯಾವ ನಾಯಕರೂ ಸಂಪರ್ಕ ಮಾಡಿ, ಮತ ಕೇಳಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಆತ್ಮಸಾಕ್ಷಿ ಮತ ಹಾಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಎರಡು ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ.












