ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಘನ ಘೋರ ಕೃತ್ಯ | ಆರೈಕೆ ಮಾಡಲಾಗದೇ 50 ದಿನದ ಹಸುಗೂಸಿನ ಹತ್ಯೆ: ಹೆತ್ತ ತಾಯಿ ಸೇರಿ 4 ಮಂದಿ ಬಂಧನ
10/08/2026, 20:49
ಬೀದರ್(reporterkarnataka.com):ಮಗುವನ್ನು ಆರೈಕೆ ಮಾಡಲು ಸಾಧ್ಯವಾಗದೆ 50 ದಿನದ ಹಸುಗೂಸನ್ನು ಹೆತ್ತ ತಾಯಿಯೇ ತನ್ನ ಕುಟುಂಬದವರೊಂದಿಗೆ ಸೇರಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಅತ್ಯಂತ ಅಮಾನವೀಯ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ವಾಣಿಶ್ರೀ, ಆಕೆಯ ತಂದೆ ಬಸವರಾಜ್, ತಾಯಿ ರತ್ನಮಾ ಹಾಗೂ ಸಹೋದರ ಸಂತೋಷ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ದೇಗೂಲೂರು ತಾಲೂಕಿನ ಕವಳಗಡ್ಡ ಗ್ರಾಮದ ಸಂಜು ಎಂಬುವವರ ಜೊತೆ ವಾಣಿಶ್ರೀ ಮದುವೆಯಾಗಿದ್ದು, ಇಬ್ಬರೂ ತೆಲಂಗಾಣದ ನಿಜಾಮಾಬಾದ್ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಹೆರಿಗೆಗಾಗಿ ವಾಣಿಶ್ರೀ ತವರು ಮನೆಗೆ ಬಂದಿದ್ದರು. 50 ದಿನದ ‘ಓಂಕಾರ’ ಎಂಬ ಗಂಡು ಮಗುವಿನ ಕೊಲೆ ನಡೆದ ಬಳಿಕ, “ರಾತ್ರಿ ಶೌಚಕ್ಕೆ ಹೋಗಿ ಬರುವಷ್ಟರಲ್ಲಿ ಮಗುವನ್ನು ದೇವರು ತೆಗೆದುಕೊಂಡು ಹೋದ” ಎಂದು ಆರೋಪಿಗಳು ಮಗುವಿನ ತಂದೆ ಸಂಜು ಮುಂದೆ ಸುಳ್ಳು ಕಥೆ ಕಟ್ಟಿದ್ದರು.ಆರೋಪಿಗಳ ಹೇಳಿಕೆಯಿಂದ ತೀವ್ರ ಅನುಮಾನಗೊಂಡ ಪತಿ ಸಂಜು ತಕ್ಷಣ ಸಂತಪೂರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಆರೋಪಿಗಳು ಮಗುವನ್ನು ಆರೈಕೆ ಮಾಡಲು ಸಾಧ್ಯವಾಗದೆ ಕೊಲೆ ಮಾಡಿ ಬಾವಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇತ್ತ ಈ ಕೃತ್ಯದ ಹಿಂದೆ ಮೂಢನಂಬಿಕೆಯ ಕೈವಾಡವೂ ಇದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.












