ಇತ್ತೀಚಿನ ಸುದ್ದಿ
ಬಿಡಿ ಸರ್, ಹೊಡೆಯುವುದು ಬೇಡ ಎಂದರೂ ಹೊಡೆದರು, ಸಿಗರೇಟ್ನಿಂದ ಸುಟ್ಟರು: ನಟ ದರ್ಶನ್ ಆಪ್ತ ಪ್ರದೋಷ್ ಸ್ಫೋಟಕ ಹೇಳಿಕೆ
09/08/2026, 13:07
ಬೆಂಗಳೂರು(reporterkarnataka.com): ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ತಿರುವುಗಳು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯು ದರ್ಶನ್ ಹಾಗೂ ಅವರ ತಂಡ ನಡೆಸಿದ ಹತ್ಯಾಕಾಂಡದ ಇಂಚಿಂಚೂ ಮಾಹಿತಿಯನ್ನು ಬಹಿರಂಗಪಡಿಸಿದೆ. ತನ್ನ ಅರ್ಜಿಯಲ್ಲಿ ಪ್ರದೋಷ್, “ನನ್ನದೇನೂ ತಪ್ಪಿಲ್ಲ, ನಾನು ತಡೆಯಲು ಯತ್ನಿಸಿದರೂ ದರ್ಶನ್ ಮತ್ತು ತಂಡ ಕೇಳಲಿಲ್ಲ” ಎಂದು ಹೇಳಿಕೊಂಡಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಪೋಟಕ ಸಂಗತಿಗಳನ್ನು ತೆರೆದಿಟ್ಟಿದ್ದಾನೆ.
ಪ್ರದೋಷ್ ಕೋರ್ಟ್ಗೆ ನೀಡಿರುವ ಹೇಳಿಕೆಯ ಪ್ರಕಾರ, ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಅಮಾನುಷವಾಗಿ ಹಲ್ಲೆ ನಡೆಸಿದೆ. “ಬೇಡ ಸರ್, ಹೊಡೆಯುವುದು ಬಿಡಿ” ಎಂದು ನಾನು ಎಷ್ಟೇ ಮನವಿ ಮಾಡಿದರೂ ಯಾರೂ ನನ್ನ ಮಾತು ಕೇಳಲಿಲ್ಲ. ಹಲ್ಲೆಯ ವೇಳೆ ರೇಣುಕಾಸ್ವಾಮಿಗೆ ಸಿಗರೇಟ್ನಿಂದ ಸುಟ್ಟು ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೆ, ಸ್ವತಃ ದರ್ಶನ್ ಅವರೇ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ರೇಣುಕಾಸ್ವಾಮಿಯ ಮೊಬೈಲ್ ಪರಿಶೀಲಿಸಿದಾಗ ಆತ ಪವಿತ್ರಾ ಗೌಡಗೆ ಮಾತ್ರವಲ್ಲದೆ ಇನ್ನು ಮೂವರು ಮಹಿಳೆಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿರುವುದು ಬೆಳಕಿಗೆ ಬಂತು. ಇದನ್ನು ತಿಳಿದ ದರ್ಶನ್ ಮತ್ತು ತಂಡ ಮತ್ತಷ್ಟು ಆಕ್ರೋಶಗೊಂಡು ಆತನ ಮೇಲಿನ ಹಿಂಸಾಚಾರದ ಪ್ರಮಾಣವನ್ನು ಹೆಚ್ಚಿಸಿತು. ಗ್ಯಾಂಗ್ನ ಹಲ್ಲೆಯಿಂದ ತೀವ್ರವಾಗಿ ನರಳುತ್ತಿದ್ದ ರೇಣುಕಾಸ್ವಾಮಿಗೆ ನಾನೇ ವೈಯಕ್ತಿಕವಾಗಿ ಊಟ ಮತ್ತು ನೀರನ್ನು ತಂದುಕೊಟ್ಟಿದ್ದೆ, ಆದರೆ ಪರಿಸ್ಥಿತಿ ನನ್ನ ಕೈಮೀರಿ ಹೋಗಿತ್ತು ಎಂದು ಪ್ರದೋಷ್ ಆ ಕ್ಷಣದ ಭೀಕರತೆಯನ್ನು ಹಂಚಿಕೊಂಡಿದ್ದಾನೆ.
ಘಟನೆಯ ಬಳಿಕ ಚಾಲಕ ರವಿಶಂಕರ್ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದಾಗ ದರ್ಶನ್ ತೀವ್ರ ಆತಂಕಕ್ಕೊಳಗಾಗಿದ್ದರು. “ಈ ಕೊಲೆ ಕೇಸ್ನಿಂದ ಪಾರಾಗಲು ನನಗೆ ಸಹಾಯ ಮಾಡದಿದ್ದರೆ ನಾನೇ ಗುಂಡು ಹಾರಿಸಿಕೊಂಡು ಸಾಯುತ್ತೇನೆ, ನಾನು ಬದುಕುವುದಿಲ್ಲ” ಎಂದು ದರ್ಶನ್ ಬೆದರಿಕೆ ಹಾಕಿದ್ದರು. ಆ ಭೀತಿಯಿಂದಲೇ ನಾನು ಶವ ವಿಲೇವಾರಿ ಮಾಡಲು ಹಾಗೂ ಕೇಸ್ ಮುಚ್ಚಿಹಾಕಲು ಅನಿವಾರ್ಯವಾಗಿ ಸಹಾಯ ಮಾಡಬೇಕಾಯಿತು ಎಂದು ಪ್ರದೋಷ್ ಹೇಳಿದ್ದಾನೆ.












