ಇತ್ತೀಚಿನ ಸುದ್ದಿ
ಸುವೇಂದು ಪಿಎ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ಸಿಐಡಿ ತನಿಖೆ
11/05/2026, 10:16
ಕೋಲ್ಕತ್ತಾ(reporterkarnataka.com): ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದಲ್ಲಿ ಈಗ ಒಂದು ಸ್ಫೋಟಕ ತಿರುವು ಸಿಕ್ಕಿದೆ. ಈ ಕೇಸ್ನಲ್ಲಿ(Case) ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆ ಎಂಬ ಸಂಶಯವಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಮತ್ತೊಂದು ಮಹತ್ವದ ಮಾಹಿತಿ ದೊರೆತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
*ಕೇಸ್ಗೆ ಬಿಗ್ ಟ್ವಿಸ್ಟ್!:*
ಪಶ್ಚಿಮ ಬಂಗಾಳದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿರುವ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ಸಂಗತಿ ಬೆಳಕಿಗೆ ಬರುತ್ತಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನಾಗಿದ್ದ ಚಂದ್ರನಾಥ್ ರಾಥ್ ಹತ್ಯೆ ಪೂರ್ವನಿಯೋಜಿತವಾಗಿದ್ದು, ಇದಕ್ಕಾಗಿ ಸುಮಾರು 45 ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
*ಪ್ರಾಥಮಿಕ ತನಿಖೆ ಏನು ಹೇಳುತ್ತೆ?:*
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಚಂದ್ರನಾಥ್ ರಾಥ್ ಸಂಚರಿಸುತ್ತಿದ್ದ ಮಾರ್ಗ, ಅವರ ದಿನಚರಿ ಹಾಗೂ ಭದ್ರತಾ ಚಲನವಲನಗಳ ಬಗ್ಗೆ ಹಂತ ಹಂತವಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. ಹತ್ಯೆಗೆ ಬಳಸಿದ ವಾಹನವನ್ನು ಜಾರ್ಖಂಡ್ನಿಂದ ತರಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾರಿನ ನಂಬರ್ಪ್ಲೇಟ್ ಹಾಗೂ ಚಾಸಿಸ್ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದ್ದು, ಆರೋಪಿಗಳು ಯಾವುದೇ ಸುಳಿವು ಬಿಟ್ಟುಕೊಡದಂತೆ ಸೂಕ್ಷ್ಮವಾಗಿ ಯೋಜನೆ ರೂಪಿಸಿದ್ದರೆಂದು ಪೊಲೀಸರು ಶಂಕಿಸುತ್ತಿದ್ದಾರೆ.
*ಮನೆಗೆ ತೆರಳುತ್ತಿದ್ದಾಗ ದಾಳಿ:*
ಘಟನೆಯ ದಿನ ರಾತ್ರಿ, ಚಂದ್ರನಾಥ್ ರಾಥ್ ತಮ್ಮ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ದಾಳಿ ನಡೆದಿದೆ. ಮೊದಲು ಒಂದು ಕಾರು ಅವರ ವಾಹನದ ದಾರಿಯನ್ನು ತಡೆದಿದ್ದು, ತಕ್ಷಣವೇ ಬೈಕ್ನಲ್ಲಿ ಬಂದ ಶೂಟರ್ಗಳು ಸಮೀಪದಿಂದ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ರಾಥ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಅವರ ಚಾಲಕರಿಗೂ ಗುಂಡೇಟು ತಗುಲಿ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲೇ ಹಲವು ಕಾರ್ತೂಸ್ಗಳು ಪತ್ತೆಯಾಗಿದ್ದು, ವೃತ್ತಿಪರ ಶೂಟರ್ಗಳ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
*ಪ.ಬಂಗಾಳದ ಸಿಐಡಿಯಿಂದ ತನಿಖೆ!:*
ಈ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಸಿಐಡಿ ವಹಿಸಿಕೊಂಡಿದೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕಾಲ್ ಡೇಟಾ ಹಾಗೂ ಸ್ಥಳೀಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತನಿಖಾ ತಂಡ ಉತ್ತರ ಪ್ರದೇಶ ಹಾಗೂ ಒಡಿಶಾದಲ್ಲಿಯೂ ತನಿಖೆ ವಿಸ್ತರಿಸಿದೆ. ಇದುವರೆಗೆ ಕೆಲವರನ್ನು ವಿಚಾರಣೆಗೊಳಪಡಿಸಿದರೂ, ಪ್ರಮುಖ ಆರೋಪಿಗಳು ಇನ್ನೂ ಸಿಕ್ಕಿಲ್ಲ.
*ಬಿಜೆಪಿ ಆರೋಪವೇನು?:*
ಚಂದ್ರನಾಥ್ ರಾಥ್ ಕುಟುಂಬದವರು ಹಾಗೂ ಬಿಜೆಪಿ ನಾಯಕರು ಇದು ರಾಜಕೀಯ ಪ್ರೇರಿತ ಹತ್ಯೆ ಎಂದು ಆರೋಪಿಸಿದ್ದಾರೆ. ಸುವೇಂದು ಅಧಿಕಾರಿ ಕೂಡಲೇ ಪ್ರತಿಕ್ರಿಯಿಸಿ, “ಇದು ಪೂರ್ವನಿಯೋಜಿತ ಕೊಲೆ. ಹಲವು ದಿನಗಳ ನಿಗಾವಹಿಸಿ ನಂತರವೇ ದಾಳಿ ನಡೆಸಲಾಗಿದೆ” ಎಂದು ಹೇಳಿದ್ದಾರೆ. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿ ಹಾಕಿ, ಸ್ವತಂತ್ರ ತನಿಖೆಗೆ ಆಗ್ರಹಿಸಿದೆ.












