ಇತ್ತೀಚಿನ ಸುದ್ದಿ
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್
26/06/2026, 16:10
ಮಂಗಳೂರು(reporterkarnataka.com):ಮಂಗಳೂರಿನಲ್ಲೇ ಇದ್ದಿದ್ದರೆ, ನಾನು ಇಲ್ಲಿನ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಇಲ್ಲಿಯೇ ಶಿಕ್ಷಕನಾಗುತ್ತಿದ್ದೆ’ ಎಂದು ಗುರುವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ ಮಾತಿದು.
ರಿಯಲ್ ಎಸ್ಟೇಟ್ ಉದ್ಯಮದ ರೋಹನ್ ಕಾರ್ಪೊರೇಷನ್ ಸಂಸ್ಥೆಯು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಆಯೋಜಿಸಿದ್ದ ‘ಆಯನ್ ಈನ್ನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ‘ನಮಸ್ಕಾರ ಕುಡ್ಡ, ಎಂಚ ಉಲ್ಲರ್’ ಎಂತಲೇ ಮಾತನ್ನು ಆರಂಭಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಶಾರುಖ್ ಖಾನ್, ‘ನನ್ನ ಅಜ್ಜ ಎನ್ಎಂಪಿಟಿಯಲ್ಲಿ ಎಂಜಿನಿಯರ್ ಆಗಿದ್ದರು. ಆ ವೇಳೆ ಅಂದರೆ, 1965-67ರವರೆಗೆ ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದು ಪಣಂಬೂರಿನ ಕಡಲತೀರದಲ್ಲಿ. ಆಗ ಹಸುಳೆಯಾಗಿದ್ದ ನನಗೆ, ಆ ದಿನಗಳು ನೆನಪಿನಿಂದ ಮರೆಯಾಗಿದ್ದರೂ, ಹಿರಿಯರು ಹೇಳಿದ ಕಥೆಗಳು ಹಸುರಾಗಿವೆ’ ಎಂದಿದ್ದಾರೆ. ಶಾರುಖ್ ಖಾನ್, ತಮ್ಮ ವೃತ್ತಿ ಜೀವನದಲ್ಲಿ 34 ವರ್ಷಗಳನ್ನು ಪೂರೈಸಿದ್ದಾರೆ. ಇದೇ ವೇಳೆ ಅವರು ‘ಚಮ್ಮಕ್ ಚಲ್ಲೋ ಮತ್ತು ಜೂಮ್ ಜೋ ಪಠಾಣ್ನಂತಹ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ತೆರೆ ಮೇಲೆ ಈ ಹಾಡುಗಳಲ್ಲಿ ಕಾಣಿಸಿಕೊಂಡಿದ್ದ ಶಾರುಖ್ ಅವರ ನೆನಪುಗಳನ್ನು ವೇದಿಕೆ ಮೇಲೆ ಮತ್ತೆ ನೆನಪಿಸಿದ್ದಾರೆ.












