ಇತ್ತೀಚಿನ ಸುದ್ದಿ
Bangalore | ಬಿಡದಿ ಟೌನ್ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ: ಬಿಗುವಿನ ವಾತಾವರಣ
21/06/2026, 18:16
ಬೆಂಗಳೂರು(reporterkarnataka.com): ರಾಮನಗರ ತಾಲ್ಲೂಕಿನ ಬಿಡದಿ(Bidadi) ಹೋಬಳಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಟೌನ್ಶಿಪ್) ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಪರ-ವಿರೋಧ ಬಣಗಳ ನಡುವೆ ವಾಗ್ವಾದ ನಡೆದಿದೆ. ಯೋಜನೆ ಪರವಾಗಿದ್ದ ಗ್ರಾಮಸ್ಥರು ಪಾದಯಾತ್ರೆಗೆ ತಡೆ ಒಡ್ಡಿದ್ದರಿಂದ ಬಿಡದಿಯ ಅಂಚಿಪುರ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಯೋಜನಾ ಪ್ರದೇಶದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಜೆಡಿಎಸ್ ವತಿಯಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂಚಿಪುರ ಗ್ರಾಮದಿಂದ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆ ಆರಂಭಿಸಿ, ಗ್ರಾಮದ ಕಾಲೊನಿ ಕಡೆಗೆ ಹೆಜ್ಜೆ ಇಡಲು ಮುಂದಾದರು. ಆದರೆ, ಅಷ್ಟರಲ್ಲೇ ಗ್ರಾಮದ ಪ್ರಮುಖ ವೃತ್ತದಲ್ಲಿ ಅಳವಡಿಸಲಾಗಿದ್ದ ಟೌನ್ಶಿಪ್ ಪರವಾದ ಫ್ಲೆಕ್ಸ್ಗಳನ್ನು ಟೌನ್ಶಿಪ್ ವಿರೋಧಿ ಹೋರಾಟಗಾರರು ಹರಿದು ಹಾಕಿದ್ದಾರೆ ಎಂಬ ಸುದ್ದಿ ಇಡೀ ಗ್ರಾಮದಲ್ಲಿ ಕಿಚ್ಚು ಹೊತ್ತಿಸಿತು.
ನಿಖಿಲ್ ಪಾದಯಾತ್ರೆಗೆ ತಡೆ ಒಡ್ಡಿದ ಗ್ರಾಮಸ್ಥರು
ನಿಖಿಲ್ ಕುಮಾರಸ್ವಾಮಿ ಅವರು ಕಾಲೊನಿಯ ಅಟ್ಟಿಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಒಳಗೆ ಬರಲು ಸಜ್ಜಾದಾಗ, ಯೋಜನೆ ಪರವಾಗಿದ್ದ ಗ್ರಾಮಸ್ಥರ ಗುಂಪು ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ ಹಾಗೂ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶೇಖರ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಎದುರುಗೊಂಡಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ನಿಖಿಲ್ ಕುಮಾರಸ್ವಾಮಿ ಅವರು ತಕ್ಷಣವೇ ತಮ್ಮ ಕಾರು ಏರಿದರು. ಆದರೆ, ಜೆಡಿಎಸ್ನ ಮಾಜಿ ಶಾಸಕ ಎ. ಮಂಜುನಾಥ್ ಅವರು ಕಾಲೊನಿ ಕಡೆಗೆ ನುಗ್ಗಲು ಮುಂದಾದಾಗ ಗ್ರಾಮಸ್ಥರು ಅವರನ್ನು ತಡೆದು ತರಾಟೆಗೆ ತೆಗೆದುಕೊಂಡರು.
ಯೋಜನೆ ಪರವಾಗಿದ್ದೇವೆ ಎಂದ ಗ್ರಾಮಸ್ಥರು
ನಾವು ಈ ಬೃಹತ್ ಯೋಜನೆಯ ಪರವಾಗಿದ್ದೇವೆ. ನಮ್ಮ ಭೂಮಿ ನಮ್ಮ ಹಕ್ಕು, ನಮಗೆ ಟೌನ್ಶಿಪ್ ಅಭಿವೃದ್ಧಿ ಬೇಕೇ ಬೇಕು. ಇದನ್ನು ಪ್ರಶ್ನಿಸಲು ಹೊರಗಿನಿಂದ ಬಂದ ನೀವ್ಯಾರು? ಎಂದು ಸ್ಥಳೀಯ ದಲಿತ ಮುಖಂಡರು ಮತ್ತು ಗ್ರಾಮಸ್ಥರು ನೇರವಾಗಿಯೇ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ನಾಯಕ ಮಂಜುನಾಥ್ ಅವರು, ಯೋಜನೆ ಪರವಾಗಿ ಇಲ್ಲಿ ಫ್ಲೆಕ್ಸ್ ಅಳವಡಿಸಲು ನೀವು ಯಾರ ಅನುಮತಿ ಪಡೆದಿದ್ದೀರಾ? ಎಂದು ಪ್ರಶ್ನಿಸಿದರು. ಮಂಜುನಾಥ್ ಅವರ ಪ್ರಶ್ನೆಗೆ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ಹಾಗಾದರೆ ಯೋಜನೆ ವಿರೋಧಿಸಿ ಫ್ಲೆಕ್ಸ್ ಹಾಕಲು ನೀವು ಯಾರ ಅನುಮತಿ ಪಡೆದಿದ್ದೀರಿ? ನಾವು ಅಭಿವೃದ್ಧಿ ಪರವಾಗಿದ್ದೇವೆ. ನಮ್ಮ ಮನೆಗಳಿರುವ ಬೀದಿಯಲ್ಲಿ ನೀವು ಯಾಕೆ ರಾಜಕೀಯ ಪಾದಯಾತ್ರೆ ಮಾಡುತ್ತೀರಿ? ಎಂದು ಮರುಪ್ರಶ್ನೆ ಹಾಕಿ ತರಾಟೆಗೆ ತೆಗೆದುಕೊಂಡರು.
ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾದ ವಾತಾವರಣ
ಇದೇ ವೇಳೆ ಟೌನ್ಶಿಪ್ ವಿರೋಧಿ ಹೋರಾಟಗಾರರು ಹಾಗೂ ಯೋಜನೆ ಪರವಿದ್ದ ಗ್ರಾಮಸ್ಥರ ನಡುವೆ ತಳ್ಳಾಟ-ನೂಕಾಟ ಮತ್ತು ವಾಗ್ವಾದ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿದರು. ಮಾಜಿ ಶಾಸಕ ಮಂಜುನಾಥ್ ಹಾಗೂ ಸ್ಥಳೀಯ ದಲಿತ ಮುಖಂಡರನ್ನು ಸಮಾಧಾನಪಡಿಸಿದ ಪೊಲೀಸರು, ಕಾಲೊನಿಯ ಗಲ್ಲಿಗಳ ಬದಲಾಗಿ ಕೇವಲ ಮುಖ್ಯಬೀದಿಯಲ್ಲಿ ಮಾತ್ರ ಪಾದಯಾತ್ರೆ ನಡೆಸುವಂತೆ ಮನವೊಲಿಸಿದರು. ಕೊನೆಗೆ ಪೊಲೀಸರ ಸಂಧಾನದ ನಂತರ ನಿಖಿಲ್ ಕುಮಾರಸ್ವಾಮಿ, ಮಂಜುನಾಥ್ ಹಾಗೂ ಜೆಡಿಎಸ್ ಕಾರ್ಯಕರ್ತರು ಗ್ರಾಮದ ಮುಖ್ಯ ವೃತ್ತದ ಮೂಲಕ ಹಾದು ಬನ್ನಿಗಿರಿ ಗ್ರಾಮದ ಕಡೆಗೆ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದರು.












