ಇತ್ತೀಚಿನ ಸುದ್ದಿ
ಉಡುಪಿ ಶ್ರೀಕೃಷ್ಣ ಮಠದ ಬಳಿ ತೆಲಂಗಾಣದ ಕುಟುಂಬದ ಮೇಲೆ ಹಲ್ಲೆ ಪ್ರಕರಣ: ಕೊರಂಗ್ರಪಾಡಿ ನಿವಾಸಿ ಆರೋಪಿಯ ಬಂಧನ
11/06/2026, 11:25
ಉಡುಪಿ(reporterkarnataka.com): ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ತೆಲಂಗಾಣದ ಕುಟುಂಬದ ಮೇಲೆ ಕೋಲಿನಿಂದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕೊರಂಗ್ರಪಾಡಿಯ ಸುಪ್ರೀತ್ ಕುಮಾರ್(40) ಬಂಧಿತ ಆರೋಪಿ. ಜೂ.9ರಂದು ಸಂಜೆ 7:50ರ ಸುಮಾರಿಗೆ ತೆಲಂಗಾಣ ರಾಜ್ಯದ ಹೈದರಾಬಾದಿನ ರಂಗರಾವ್ ಎಂಬವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು, ಕಾರು ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಾಸ್ಥಾನಕ್ಕೆ ದರ್ಶನ ಮಾಡಲು ರಸ್ತೆ ದಾಟುತ್ತಿದ್ದರು. ಆಗ ಒಮ್ಮಲೇ ಕಾರನ್ನು ಜೋರಾಗಿ ಚಲಾಯಿಸಿಕೊಂಡು ಬಂದ ಸುಪ್ರೀತ್, ರಸ್ತೆ ದಾಟುತ್ತಿದ್ದ ರಂಗರಾವ್ ಹಾಗೂ ಅವರ ಕುಟುಂಬದವರ ಮೇಲೆ ಕಾರನ್ನು ಹಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಆಗ ರಂಗ ರಾವ್ ಚಾಲಕನಿಗೆ ನಿಧಾನವಾಗಿ ಬರುವಂತೆ ಹೇಳಿದಾಗ ಆತ ‘ನಾನು ಇಲ್ಲಿಯ ಸ್ಥಳೀಯ ವ್ಯಕ್ತಿ, ನನ್ನ ಕಾರಿಗೆ ಯಾವುದೇ ಹಾರ್ನ್ ಮತ್ತು ಬ್ರೇಕ್ ಇಲ್ಲ, ನಾನು ಇದೇ ರೀತಿ ಕಾರು ಚಾಲನೆ ಮಾಡುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಬಳಿಕ ಕಾರಿನಲ್ಲಿದ್ದ ಕೋಲನ್ನು ತಂದು ರಂಗ ರಾವ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ರಂಗ ರಾವ್ ತಲೆಗೆ ಗಾಯವಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












