ಇತ್ತೀಚಿನ ಸುದ್ದಿ
ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ
11/06/2026, 11:20
ಹಾಸನ(repoeterkarnataka.com): ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಆದರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಸಾರ್ವಜನಿಕರನ್ನು ಒಂದೆಡೆ ಆತಂಕಕ್ಕೆ, ಮತ್ತೊಂದೆಡೆ ತಮಾಷೆಯ ಕುತೂಹಲಕ್ಕೆ ಈಡುಮಾಡುವ ಅಪರೂಪದ ಘಟನೆಯೊಂದು ನಡೆದಿದೆ. ಗುಂಪಿನಿಂದ ಬೇರ್ಪಟ್ಟಿರುವ ಕಾಡಾನೆ ಮರಿಯೊಂದು ರಸ್ತೆಯಲ್ಲಿದ್ದ ಹಸುವಿನ ಕರುಗಳನ್ನು ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಲ್ಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ದಟ್ಟವಾದ ಕಾಫಿ ತೋಟಗಳಿವೆ. ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಸಾಮಾನ್ಯವಾಗಿದೆ. ಆನೆಗಳ
ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಕಾಡಾನೆ ಮರಿಯೊಂದು, ಒಂದು ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹೋಗಲು ಯತ್ನಿಸುತ್ತಿತ್ತು. ಇದೇ ಸಮಯದಲ್ಲಿ ಕಲ್ಲಹಳ್ಳಿ ಗ್ರಾಮದ ಲಿಂಕ್ ರಸ್ತೆಯಲ್ಲಿ ಕರುಗಳು ಸಾಗುತ್ತಿದ್ದವು. ರಸ್ತೆಯಲ್ಲಿ ಕರುಗಳು ಎದುರಾಗುತ್ತಿದ್ದಂತೆಯೇ ಮರಿಯಾನೆ ಜೋರಾಗಿ ಕೂಗುತ್ತಾ ಅವುಗಳ ಕಡೆಗೆ ನುಗ್ಗಿದೆ. ಮರಿಯಾನೆಯ ಹಠಾತ್ ಆರ್ಭಟ ಹಾಗೂ ಓಟಕ್ಕೆ ಹೆದರಿದ ಕರುಗಳು ಜೀವ ಉಳಿಸಿಕೊಳ್ಳಲು ರಸ್ತೆಯುದ್ದಕ್ಕೂ ಓಡಲಾರಂಭಿಸಿವೆ. ಮರಿಯಾನೆ ಸುಮ್ಮನಾಗದೆ ಸತತ ಎರಡು ಬಾರಿ ಕರುಗಳನ್ನುಅಟ್ಟಾಡಿಸಿದೆ. ಈ ಮರಿಯಾನೆಯ ತುಂಟಾಟ ಹಾಗೂ ಓಡಾಟದ ಸಂಪೂರ್ಣ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದಾರೆ.












