ಇತ್ತೀಚಿನ ಸುದ್ದಿ
ಶಕ್ತಿ ಯೋಜನೆಯಿಂದ ವ್ಯಾಪಾರ ನಷ್ಟ, ಸಾಲಗಾರರ ಕಾಟ: ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು ಬಟ್ಟೆ ವ್ಯಾಪಾರಿ ಸಾವಿಗೆ ಶರಣು
09/06/2026, 18:41
ಮಂಡ್ಯ(reporterkarnataka.com): ಮಂಡ್ಯದ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವಿಗೀಡಾದ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಪತ್ನಿ ಮತ್ತು ಮಗನನ್ನು ಕೊಂದು ಬಟ್ಟೆ ವ್ಯಾಪಾರಿ ನೇಣಿಗೆ ಶರಣಾಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತರನ್ನು ತಂದೆ ಪ್ರಭಾಕರ್, ತಾಯಿ ಜ್ಯೋತಿ ಮತ್ತು ಮಗ ಸಂತೋಷ್ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯಲ್ಲೇ ತಾಯಿ ಜ್ಯೋತಿ ಹಾಗೂ ಮಗ ಸಂತೋಷ್ ನಿಗೂಢವಾಗಿ ಸಾವಿಗೀಡಾಗಿದ್ದರು. ಈ ದುರಂತದ ಬೆನ್ನಲ್ಲೇ ಇಂದು ತಂದೆ ಪ್ರಭಾಕರ್ ಅವರು ನೆಹರು ನಗರದಲ್ಲಿರುವ ತಮ್ಮದೇ ಮಾಲೀಕತ್ವದ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು.
ಈ ಪ್ರಕರಣದ ಬಗ್ಗೆ ಮಂಡ್ಯ ಎಸ್ಪಿ ಶೋಭಾರಾಣಿಯವರು ಮಾಹಿತಿ ನೀಡಿದ್ದು, ಡೆತ್ನೋಟ್ ಪತ್ತೆಯಾಗಿರುವುದನ್ನು ತಿಳಿಸಿದ್ದಾರೆ. ಡೆತ್ನೋಟ್ನಲ್ಲಿ ಸಾಲಗಾರರ ಭಯ ಹಾಗೂ ಕಿರುಕುಳದಿಂದ ಸಾವಿನ ದಾರಿ ಹಿಡಿದಿರುವುದಾಗಿ ಪ್ರಭಾಕರ್ ಅವರು ಬರೆದಿದ್ದಾರೆ. ಅಲ್ಲದೆ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಬಗ್ಗೆಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪ್ರಭಾಕರ್ ಅವರು ತಮ್ಮ ಪತ್ನಿ ಮತ್ತು ಮಗನನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ. ನಿನ್ನೆ ತಡರಾತ್ರಿ 3.30ಕ್ಕೆ ಕೊಲೆ ನಡೆದಿದೆ. ಪತ್ನಿ ಜ್ಯೋತಿಯನ್ನು ಪಂಚೆಯಿಂದ ಉಸಿರುಗಟ್ಟಿಸಿ ಪ್ರಭಾಕರ್ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಬೆಳಗ್ಗೆ ತಮ್ಮ ಅಂಗಡಿಯಲ್ಲಿ ಪ್ರಭಾಕರ್ ನೇಣಿಗೆ ಶರಣಾಗಿದ್ದಾರೆ.
ಸಾಲದ ಕಿರುಕುಳದಿಂದ ಮನನೊಂದಿರುವುದಾಗಿ ಡೆತ್ನೋಟ್ನಲ್ಲಿ ಪ್ರಭಾಕರ್ ಉಲ್ಲೇಖಿಸಿದ್ದಾರೆ. ಶಕ್ತಿ ಯೋಜನೆಯಿಂದ ಬಟ್ಟೆ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದೇನೆ. ಸಾಲವನ್ನು ಕೊಡದಿದ್ದರೆ ಫೈನಾನ್ಸ್ನವರು ಮನೆ ಬಳಿ ಬರುತ್ತಾರೆ ಎಂದು ಡೆತ್ನೋಟ್ನಲ್ಲಿ ಬರೆದಿರುವುದಾಗಿ ಎಸ್ಪಿ ಶೋಭಾರಾಣಿ ಅವರು ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಮಗ ಸಂತೋಷ್ ಅವರ ಮದುವೆ ಸಡಗರದಿಂದ ನೆರವೇರಿತ್ತು. ಮಗನ ಮದುವೆಯಿಂದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.












