1:53 PM Monday15 - June 2026
ಬ್ರೇಕಿಂಗ್ ನ್ಯೂಸ್
ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ…

ಇತ್ತೀಚಿನ ಸುದ್ದಿ

Bangalore | ನೌಕರಿ ಕೊಡಿಸುವುದಾಗಿ 40 ಮಂದಿಗೆ 5.3 ಕೋಟಿ ವಂಚನೆ: ಅಪ್ಪ -ಮಗಳು ಸೆರೆ

09/06/2026, 21:26

ಬೆಂಗಳೂರು(reporterkarnataka.com): ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ 40ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನಂಬಿಸಿ ಕೋಟ್ಯಂತರ ರೂ. ವಂಚಿಸಿದ ತಂದೆ ಮತ್ತು ಮಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ. ನಗರದ ಗಂಗೇನಹಳ್ಳಿ ನಿವಾಸಿ ಎಂ.ಎ.ಮನ್ಸೂರ್ ಅಹಮದ್ (75) ಮತ್ತು ಈತನ ಪುತ್ರಿ ಶಂಶಾದ್‌ ಬೇಗಂ (48) ಬಂಧಿತರು.ಆರೋಪಿಗಳು ಇದುವರೆಗೂ 40ಕ್ಕೂ ಹೆಚ್ಚು ಮಂದಿಗೆ 5.30 ಕೋಟಿ ರೂ. ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಸಂಗಮೇಶ್‌ ರಾಚಯ್ಯ ವಸ್ತ್ರದ್‌ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ. ಆರೋಪಿಗಳ ಜಾಲ ದೊಡ್ಡದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳು ತಮಗೆ ರಾಜಕೀಯ ಹಿನ್ನೆಲೆ ಇದ್ದು, ಅವರ ಮೂಲಕ ಸರ್ಕಾರದ ಹಿರಿಯ ಅಧಿಕಾರಿಗಳು ಪರಿಚಯವಿದ್ದಾರೆ. ಸರ್ಕಾರದ ವಿವಿಧ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆಲವರ ಮೂಲಕ ಅಭ್ಯರ್ಥಿಗಳನ್ನು ಪರಿಚಯಿಸಿಕೊಂಡು ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ. ನಂತರ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದರು.

*ಉತ್ತರ ಕರ್ನಾಟಕದವರೇ ಹೆಚ್ಚು!:*
ವಂಚನೆಗೊಳಗಾದವರ ಪೈಕಿ ಶೇ.90ರಷ್ಟು ಮಂದಿ ಉತ್ತರ ಕರ್ನಾಟದವರಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತರ ಕರ್ನಾಟಕದವರು ಆಸಕ್ತಿ ಹೊಂದಿರುತ್ತಾರೆ. ಹೀಗಾಗಿ ಆರೋಪಿಗಳು ಆ ಭಾಗ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

*ಉತ್ತರ ಭಾರತದಲ್ಲಿ ತರಬೇತಿ :*
ನಕಲಿ ನೇಮಕಾತಿ ಪತ್ರ ನೀಡಿದ ಬಳಿಕ ಮುಂಬೈ, ಬೆಂಗಳೂರು ಮತ್ತು ಕೋಲ್ಕತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲಿಗೆ 4 ತಿಂಗಳ ಸಂಬಳ ರಹಿತ ತರಬೇತಿಗೆ ಕಳುಹಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಇನ್ನು ಆರೋಪಿಗಳು, ರೈಲ್ವೆ, ಆದಾಯ ತೆರಿಗೆ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಸಿಕೊಡುವ ಭರವಸೆ ನೀಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ರಾಜಕೀಯ ಪಕ್ಷಗಳ ಮೂಲಕ ಪರಿಚಯವಿದ್ದು, ಅವರ ಮೂಲಕ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂಬುದಾಗಿ ಅಭ್ಯರ್ಥಿಗಳನ್ನು ನಂಬಿಸುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಆರೋಪಿಗಳಾದ ಎಂ.ಎ.ಮನ್ಸೂರ್ ಅಹಮದ್ ಹಾಗೂ ಶಂಶಾದ್ ಬೇಗಂ ದೂರುದಾರರಿಗೆ ಮೊದಲೇ ಪರಿಚಯವಿದ್ದರು. ನಿರುದ್ಯೋಗ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುತ್ತೇವೆ. ಯಾರಾದರೂ ಇದ್ದರೆ ತಿಳಿಸಿ ಎಂಬುದಾಗಿ ಸಂಗಮೇಶ್‌ಗೆ ತಿಳಿಸಿದ್ದರು. ಆರೋಪಿಗಳ ಮಾತು ನಂಬಿದ್ದ ದೂರುದಾರ, ತಮಗೆ ಪರಿಚಯವಿದ್ದ ಅಭ್ಯರ್ಥಿಗಳಿಗೆ ಮಾಹಿತಿ ನೀಡಿ, ಅವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಸಿಸಿಬಿ ಡಿಸಿಪಿ ಹರಿಬಾಬು ಮತ್ತು ಸಂಘಟಿತ ಅಪರಾಧ ದಳ(ಪೂರ್ವ)ದ ಎಸಿಪಿ ಆನಂದ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು