ಇತ್ತೀಚಿನ ಸುದ್ದಿ
ಖ್ಯಾತ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಇನ್ನೆರೆಡು ದಿನದಲ್ಲಿ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಕೆ
28/08/2026, 20:38
ಬೆಂಗಳೂರು(reporterkarnataka.com): ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಇನ್ನೆರಡು ದಿನಗಳಲ್ಲಿ ಮ್ಯಾಜಿಸ್ಟ್ರೇಟ್ಗೆ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
ಎಸ್ಐಟಿ ತನಿಖೆಯ ಪ್ರಕಾರ, ರಾಯ್ ಅವರಿಗೆ ಆಪ್ತನಾಗಿದ್ದ ನಂಬಿಕಸ್ಥ ವ್ಯಕ್ತಿಯಿಂದಾದ ವಿಶ್ವಾಸದ್ರೋಹ ಹಾಗೂ ಆದಾಯ ತೆರಿಗೆ ಇಲಾಖೆ (ಐಟಿ)ಗೆ ಆದಾಯದ ಮೂಲಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವ ಸಂದರ್ಭದಲ್ಲಿ ಎದುರಾದ ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.
*ನಂಬಿಕಸ್ಥನಿಂದ ಕೋಟ್ಯಂತರ ರೂಪಾಯಿ ವಂಚನೆ ಆರೋಪ*
ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಯ್ ಅವರ ‘ನೇಚರ್ಸ್ ಲಕ್ಶುರಿ’ ರೆಸಾರ್ಟ್ನ ನಿರ್ವಹಣೆಯ ಹೊಣೆಯನ್ನು ಅವರು ಹಲವು ವರ್ಷಗಳಿಂದ ತಮ್ಮ ನಂಬಿಕಸ್ಥನೊಬ್ಬನಿಗೆ ವಹಿಸಿದ್ದರು. ಆದರೆ, ಆತ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ವಂಚನೆ ನಡೆದಿರುವುದು ತಿಳಿದ ಬಳಿಕ ರಾಯ್ ಆತನನ್ನು ದೂರವಿಟ್ಟಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಯ್ ವಿರುದ್ಧವೂ ಆ ವ್ಯಕ್ತಿ ದೂರು ನೀಡಿದ್ದ. ಈ ಬೆಳವಣಿಗೆ ರಾಯ್ ಅವರಿಗೆ ತೀವ್ರ ಮಾನಸಿಕ ಆಘಾತ ಉಂಟುಮಾಡಿತ್ತು ಎನ್ನಲಾಗಿದೆ.
ಪ್ರಕರಣದ ತನಿಖೆ ವೇಳೆ ಆಪ್ತನನ್ನು ಎಸ್ಐಟಿ ವಿಚಾರಣೆ ನಡೆಸಿದ್ದು, ತಾನು ರಾಯ್ ಅವರಿಗೆ ಯಾವುದೇ ವಿಶ್ವಾಸದ್ರೋಹ ಮಾಡಿಲ್ಲ ಎಂದು ಆತ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
*ಐಟಿ ದಾಳಿ ಬಳಿಕ ಆದಾಯದ ಲೆಕ್ಕದ ಸಂಕಷ್ಟ*
2025ರಲ್ಲಿ ರಾಯ್ ಅವರ ಉದ್ಯಮ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇದಕ್ಕೂ ಕೆಲವೇ ತಿಂಗಳ ಮೊದಲು ಕಂಪನಿಯ ಹಣಕಾಸು ನಿರ್ವಹಣೆಯ ಹೊಣೆ ಹೊತ್ತಿದ್ದ ಲೆಕ್ಕ ಪರಿಶೋಧಕರು ಕೆಲಸ ತೊರೆದಿದ್ದರು ಎನ್ನಲಾಗಿದೆ. ಐಟಿ ಅಧಿಕಾರಿಗಳು ತೆರಿಗೆ ಸಂಬಂಧಿತ ವಿಚಾರದಲ್ಲಿ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಎಸ್ಐಟಿ ಪರಿಗಣಿಸಿದೆ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಯಾರ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಇಲ್ಲ.
*ಸಾವಿಗೆ ಪ್ರಮುಖ 2 ಕಾರಣಗಳು*
1. ವಿಶ್ವಾಸದ್ರೋಹ: ರೆಸಾರ್ಟ್ನ ನಿರ್ವಹಣೆಯ ಹೊಣೆ ನೀಡಿದ್ದ ನಂಬಿಕಸ್ಥನಿಂದ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಆರೋಪ ಹಾಗೂ ನಂತರ ಅದೇ ವ್ಯಕ್ತಿ ರಾಯ್ ವಿರುದ್ಧ ದೂರು ನೀಡಿದ್ದರಿಂದ ಉಂಟಾದ ಮಾನಸಿಕ ಆಘಾತ.
2. ಐಟಿ ಲೆಕ್ಕದ ಒತ್ತಡ: ತೆರಿಗೆ ದಾಳಿಗೂ ಮುನ್ನ ಲೆಕ್ಕಪರಿಶೋಧಕರು ಕಂಪನಿ ತೊರೆದಿದ್ದರಿಂದ ಆದಾಯದ ಮೂಲಗಳಿಗೆ ಸಂಬಂಧಿಸಿದ ನಿಖರ ದಾಖಲೆಗಳನ್ನು ಒದಗಿಸುವಲ್ಲಿ ಎದುರಾದ ಸಂಕಷ್ಟ.
ಇದೇ ವರ್ಷದ ಜನವರಿ 30ರಂದು ಬೆಂಗಳೂರಿನ ತಮ್ಮ ಕಂಪನಿ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆಗಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸುಮಾರು ಏಳು ತಿಂಗಳ ತನಿಖೆಯ ಬಳಿಕ ಇದೀಗ ಅಂತಿಮ ವರದಿ ಸಲ್ಲಿಸಲು ಎಸ್ಐಟಿ ಸಿದ್ಧವಾಗಿದೆ.












