ಇತ್ತೀಚಿನ ಸುದ್ದಿ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಚಿನ್ನದ ಮಾತ್ರೆ ಉಗುಳುವ ವ್ಯಕ್ತಿ!; ಈತ ಬಾಯಿ ತೆರೆದಾಗ ಉದುರಿಬಿತ್ತು ಬಂಗಾರ!!
27/08/2026, 18:04
ಬೆಂಗಳೂರು(reporterkarnataka.com): ವಿದೇಶಗಳಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಖದೀಮರು ನಿತ್ಯ ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಬಾಡಿ ಸ್ಕ್ಯಾನರ್ ಕಣ್ಣು ತಪ್ಪಿಸಲು ಬಾಯಿಯಲ್ಲೇ ಚಿನ್ನದ ಕ್ಯಾಪ್ಸೂಲ್ಗಳನ್ನು ಅಡಗಿಸಿಟ್ಟುಕೊಂಡು ಬಂದಿದ್ದ ಖತರ್ನಾಕ್ ಪ್ರಯಾಣಿಕನೊಬ್ಬ ಕೊನೆಗೂ ಭದ್ರತಾ ಸಿಬ್ಬಂದಿ ಕೈಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಸಿರಾಜ್ ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 82 ಗ್ರಾಂ ತೂಕದ 2 ಚಿನ್ನದ ಕ್ಯಾಪ್ಸೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
*ದುಬೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ*
ಪೊಲೀಸ್ ಮತ್ತು ಭದ್ರತಾ ಮೂಲಗಳ ಪ್ರಕಾರ, ಮೊಹಮ್ಮದ್ ಸಿರಾಜ್ ದುಬೈನಿಂದ ಇಂಡಿಗೋ ಏರ್ಲೈನ್ಸ್ನ 6E-1486 ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದಿದ್ದನು. ಈತ ಬೆಂಗಳೂರಿನಿಂದ ಬೆಳಗ್ಗೆ 9:20ರ ವಿಮಾನದಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್ಗೆ ಪ್ರಯಾಣ ಬೆಳೆಸಬೇಕಿತ್ತು. ಹೀಗಾಗಿ ಆತ ಟ್ರಾನ್ಸಿಟ್ ಪ್ರಯಾಣಿಕನಾಗಿ ಬೆಂಗಳೂರು ಏರ್ಪೋರ್ಟ್ನ ಟರ್ಮಿನಲ್-1ಕ್ಕೆ (T-1) ಬಂದಿದ್ದನು.
*ಅನುಮಾನ ತಂದ ವರ್ತನೆ: ಬಾಯ್ಬಿಟ್ಟಾಗ ಬಯಲಾಯ್ತು ಅಸಲಿ ಮುಖ!*
ಟರ್ಮಿನಲ್-1ರ ಭದ್ರತಾ ತಪಾಸಣಾ ಕೊಠಡಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಿರಾಜ್ನ ನಡೆ-ನುಡಿ ಮತ್ತು ಮುಖಭಾವದಲ್ಲಿ ತೀವ್ರ ಆತಂಕ ಕಂಡುಬಂದಿದೆ. ಆತ ಮಾತನಾಡಲು ತಡವರಿಸುತ್ತಿದ್ದುದನ್ನು ಗಮನಿಸಿದ ಸಿಐಎಸ್ಎಫ್ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ತಕ್ಷಣವೇ ಆತನನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಾಯಿತು. ಈ ವೇಳೆ ಬಾಯಿ ತೆರೆಯುವಂತೆ ಸೂಚಿಸಿದಾಗ, ಆತ ಬಾಯಿಯೊಳಗೆ ರಹಸ್ಯವಾಗಿ ಬಚ್ಚಿಟ್ಟುಕೊಂಡಿದ್ದ 2 ಚಿನ್ನದ ಕ್ಯಾಪ್ಸೂಲ್ಗಳು ಪತ್ತೆಯಾಗಿವೆ.
*ಬಾಡಿ ಸ್ಕ್ಯಾನರ್ನಿಂದ ತಪ್ಪಿಸಿಕೊಳ್ಳಲು ಸ್ಕೆಚ್!*
ವಿಮಾನ ನಿಲ್ದಾಣಗಳಲ್ಲಿ ಮೆಟಲ್ ಡಿಟೆಕ್ಟರ್ ಮತ್ತು ಅತ್ಯಾಧುನಿಕ ಫುಲ್ ಬಾಡಿ ಸ್ಕ್ಯಾನರ್ಗಳು ಇರುತ್ತವೆ. ಲಗೇಜ್ ಅಥವಾ ಬಟ್ಟೆಯಲ್ಲಿ ಚಿನ್ನ ಬಚ್ಚಿಟ್ಟರೆ ತಕ್ಷಣವೇ ಸಿಕ್ಕಿಬೀಳುತ್ತೇವೆ ಎಂಬ ಕಾರಣಕ್ಕೆ, ಬಾಯಿಯೊಳಗೆ ಇಟ್ಟುಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಭಾವಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.












