ಇತ್ತೀಚಿನ ಸುದ್ದಿ
ಕಾಲೇಜು ಸಹಪಾಠಿಯಿಂದ ಬ್ಲ್ಯಾಕ್ಮೇಲ್: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ; ಪಿಜಿ ರೂಂನಲ್ಲಿ ಡೆತ್ನೋಟ್ ಪತ್ತೆ
24/08/2026, 20:49
ಬೆಂಗಳೂರು(reporterkarnataka.com): ಕಾಲೇಜು ಸಹಪಾಠಿ ಯುವಕನ ಬ್ಲ್ಯಾಕ್ಮೇಲ್ ಹಾಗೂ ಕಿರುಕುಳದಿಂದ ಮನನೊಂದ ಯುವತಿ ಬೆಂಗಳೂರಿನ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಲಮಕ್ಕಿ ಗ್ರಾಮದ ವಾಣಿಶ್ರೀ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಗರದ ಪೇಯಿಂಗ್ ಗೆಸ್ಟ್ನಲ್ಲಿ ವಾಸವಾಗಿದ್ದ ಅವರು, ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
*ಯುವಕನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ*
ವಾಣಿ ಶ್ರೀ ಈ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ ಅಭಿಷೇಕ್ ಎಂಬಾತನ ಪರಿಚಯವಾಗಿತ್ತು. ಪರಸ್ಪರರು ಪ್ರೀತಿ ಮಾಡಿದ್ದರು. ನಂತರ ಅಭಿಷೇಕ್ನಿಂದ ದೂರವಾಗಿದ್ದ ವಾಣಿಶ್ರೀ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆ ನಂತರವೂ ಅಭಿಷೇಕ್, ಶಿವಮೊಗ್ಗದಿಂದಲೇ ಆಗಾಗ್ಗೆ ವಾಣಿಶ್ರೀಗೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಭಿಷೇಕ್ನ ಕಿರುಕುಳದಿಂದ ಮನನೊಂದಿದ್ದ ವಾಣಿಶ್ರೀ, ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಷೇಕ್ನ ಕಿರುಕುಳದಿಂದ ನೊಂದು ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಅಭಿಷೇಕ್ನೇ ಕಾರಣ ಎಂದು ವಾಣಿಶ್ರೀ ಅವರ ಅಕ್ಕ ಪೂಜಾ ದೂರು ಕೊಟ್ಟಿದ್ದಾರೆ. ಅಭಿಷೇಕ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಡೆತ್ನೋಟ್ ಪತ್ತೆ
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಪೇಯಿಂಗ್ ಪೆಸ್ಟ್ನಲ್ಲಿ ಪತ್ರ ಬರೆದಿಟ್ಟಿರುವ ವಾಣಿಶ್ರೀ, ”ಕಾಲೇಜು ದಿನಗಳ ಸಹಪಾಠಿ ಅಭಿಷೇಕ್ ನನ್ನ ಸಾವಿಗೆ ಕಾರಣ. ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದ ಆತ ನನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡು ವಾಟ್ಸ್ಯಾಪ್ನಲ್ಲಿ ಕಳುಹಿಸಿ ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ತಾನು ಕರೆದಾಗಲೆಲ್ಲಾ ರೂಮಿಗೆ ಬರಬೇಕು, ಇಲ್ಲದಿದ್ದರೆ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ಕುಟುಂಬದ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದ,” ಎಂದು ಉಲ್ಲೇಖಿಸಿದ್ದಾರೆ.
”ಅಭಿಷೇಕ್ನಿಂದ ಆಗುತ್ತಿರುವ ಮಾನಸಿಕ ಕಿರುಕುಳವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತೀವ್ರ ಖಿನ್ನತೆ ಮತ್ತು ಆಘಾತಕ್ಕೆ ಒಳಗಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ಸಹಪಾಠಿ ಅಭಿಷೇಕ್ ಕಾರಣ. ಅವನಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಕುಟುಂಬದವರನ್ನು ತುಂಬಾ ಪ್ರೀತಿಸುತ್ತೇನೆ, ಅವರನ್ನು ಮರೆಯಲು ಸಾಧ್ಯವಿಲ್ಲ,” ಎಂದು ವಾಣಿಶ್ರೀ ಪತ್ರದಲ್ಲಿ ತಿಳಿಸಿದ್ದಾರೆ.












