ಇತ್ತೀಚಿನ ಸುದ್ದಿ
ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್
25/04/2026, 21:03
ಶಿವಮೊಗ್ಗ (reporterkarnataka.com): ಪ್ರೀತಿಯ ವಿಚಾರವಾಗಿ ಉಂಟಾದ ಮನಸ್ತಾಪವೊಂದು ವಿಕೋಪಕ್ಕೆ ತಿರುಗಿ, ಯುವಕರ ತಂಡವೊಂದು ಅಪ್ರಾಪ್ತ ಬಾಲಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಈ ಭೀಕರ ದಾಳಿಯಲ್ಲಿ ಬಾಲಕನ ತಲೆಗೆ ಲಾಂಗ್ನಿಂದ ಬಲವಾಗಿ ಏಟು ಬಿದ್ದಿದ್ದು, ಲಾಂಗ್ ತಲೆಯಲ್ಲೇ ಸಿಲುಕಿಕೊಂಡಿರುವ ಆಘಾತಕಾರಿ ದೃಶ್ಯ ಕಂಡುಬಂದಿದೆ. ನಗರದ ವಾದಿ-ಎ-ಹುಧಾ 3ನೇ ಕ್ರಾಸ್ನಲ್ಲಿ ಈ ಘಟನೆ ಸಂಭವಿಸಿದೆ. 17 ವರ್ಷದ ಅಪ್ರಾಪ್ತ ಬಾಲಕನೇ ದುಷ್ಕರ್ಮಿಗಳ ದಾಳಿಗೆ ಒಳಗಾದ ದುರ್ದೈವಿ. ಮಾಹಿತಿ ಪ್ರಕಾರ, ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಯುವಕರ ತಂಡವೊಂದು ಬಾಲಕನನ್ನು ಅಡ್ಡಗಟ್ಟಿ ಈ ಭೀಕರ ಕೃತ್ಯ ಎಸಗಿದೆ. ದಾಳಿಯ ತೀವ್ರತೆಗೆ ಬಾಲಕನ ತಲೆಗೆ ಹೊಡೆದಿದ್ದ ಲಾಂಗ್ ತಲೆಯೊಳಗೇ ಸಿಲುಕಿಕೊಂಡಿದ್ದು, ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ತಕ್ಷಣವೇ ಗಾಯಾಳು ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ತುರ್ತು ಚಿಕಿತ್ಸೆ ಮುಂದುವರಿದಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳ ಮತ್ತು ಆಸ್ಪತ್ರೆಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ವ್ಯಾಪಕ ಭದ್ರತೆಯನ್ನು ಕೈಗೊಂಡಿದ್ದಾರೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರೀತಿಯ ವಿಚಾರವೇ ಈ ಹಲ್ಲೆಗೆ ಪ್ರಮುಖ ಕಾರಣವಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.












