ಇತ್ತೀಚಿನ ಸುದ್ದಿ
ರಾಜ್ಯಾದ್ಯಂತ ಖಾಸಗಿ ಬಸ್ ಟಿಕೆಟ್ ದರ ಶೇ. 5ರಿಂದ 8ರಷ್ಟು ಏರಿಕೆ: ವಿದ್ಯಾರ್ಥಿಗಳಿಗೆ ವಿನಾಯಿತಿ
09/06/2026, 16:26
ಉಡುಪಿ(reporterkarnataka.com): ರಾಜ್ಯದ ಪ್ರಯಾಣಿಕರಿಗೆ ಇಂದಿನಿಂದಲೇ ಅನ್ವಯವಾಗುವಂತೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದಿಗೆ ಜಾರಿಗೆ ಬರುವಂತೆ ರಾಜ್ಯಾದ್ಯಂತ ಸಂಚರಿಸುವ ಖಾಸಗಿ ಸ್ಟೇಜ್ ಬಸ್ಗಳ ಪ್ರಯಾಣ ದರವನ್ನು ಶೇಕಡಾ 5 ರಿಂದ 8ರಷ್ಟು ಹೆಚ್ಚಳ ಮಾಡಲಾಗಿದೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಾಸಗಿ ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಸುರೇಶ್ ನಾಯಕ್ ಅವರು ಈ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ಬಸ್ ಉದ್ಯಮವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.
*ದರ ಏರಿಕೆಗೆ ಕಾರಣಗಳೇನು?:*
ಸುರೇಶ್ ನಾಯಕ್ ಅವರು ದರ ಏರಿಕೆಗೆ ಈ ಪ್ರಮುಖ ಕಾರಣಗಳನ್ನು ನೀಡಿದ್ದಾರೆ:
*ಡೀಸೆಲ್ ದರ ಏರಿಕೆ:* ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದು ಬಸ್ ಮಾಲೀಕರಿಗೆ ದೊಡ್ಡ ಹೊರೆಯಾಗಿದೆ.
*ವಾಹನ ನಿರ್ವಹಣಾ ವೆಚ್ಚ:* ಟೈರ್, ವಿವಿಧ ಬಿಡಿಭಾಗಗಳು ವಾಹನ ದುರಸ್ತಿ ಹಾಗೂ ದೈನಂದಿನ ಮೇಂಟೆನೆನ್ಸ್ ವೆಚ್ಚಗಳು ಭಾರೀ ಪ್ರಮಾಣದಲ್ಲಿ ಗಗನಕ್ಕೇರಿವೆ.
*ನೌಕರರ ವೇತನದ ಒತ್ತಡ:* ಬಸ್ ಸಿಬ್ಬಂದಿ ಹಾಗೂ ನೌಕರರ ವೇತನ ಹೆಚ್ಚಳದ ಒತ್ತಡವೂ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
ರಾಜ್ಯ ಸರ್ಕಾರದ 2020ರ ಅಧಿಸೂಚನೆ ಅನ್ವಯವೇ ಈ ದರ ಹೆಚ್ಚಳಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಇಂದಿನಿಂದಲೇ (ಜೂನ್ 9) ಹೊಸ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಖಾಸಗಿ ಬಸ್ ನೆಚ್ಚಿಕೊಂಡಿರುವ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದ್ದು, ದೈನಂದಿನ ಖರ್ಚು ಮತ್ತಷ್ಟು ಹೆಚ್ಚಾಗಲಿದೆ.
*ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲ ‘ದರ ಏರಿಕೆ’ ಬಿಸಿ!:*
ಸಾಮಾನ್ಯ ಪ್ರಯಾಣಿಕರ ಟಿಕೆಟ್ ದರ ಹೆಚ್ಚಳವಾಗಿದ್ದರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಒಂದು ನಿರಾಳ ಸುದ್ದಿ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರಸಕ್ತ ಪ್ರಯಾಣ ದರ ರಿಯಾಯಿತಿಗಳು ಯಾವುದೇ ಬದಲಾವಣೆ ಇಲ್ಲದೆ ಎಂದಿನಂತೆ ಮುಂದುವರಿಯಲಿವೆ ಎಂದು ಬಸ್ ಮಾಲೀಕರ ಒಕ್ಕೂಟ ಸ್ಪಷ್ಟ ಭರವಸೆ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹೊರೆ ಬೀಳುವುದಿಲ್ಲ.ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಸದಾನಂದ ಛಾತ್ರ ಸೇರಿದಂತೆ ಉದ್ಯಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.













