ಇತ್ತೀಚಿನ ಸುದ್ದಿ
ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್ಗೆ ಬಿಜೆಪಿ ತಿರುಗೇಟು
11/05/2026, 19:05
ನವದೆಹಲಿ(reporterkarnataka.com): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಜನತೆಗೆ ‘ಮಿತವ್ಯಯ’ದ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಗೆ ನೆಹರೂ ಅವರ ಭಾಷಣವನ್ನು ಉಲ್ಲೇಖಿಸಿ ಬಿಜೆಪಿ ತಿರುಗೇಟು ನೀಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ಗೆ ರಾಷ್ಟ್ರ ನಿರ್ಮಾಣಕ್ಕಿಂತ ಅಧಿಕಾರವೇ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಹಿಂದೆ ಕೊರಿಯಾ ಅಥವಾ ಅಮೆರಿಕದಲ್ಲಿ ಯುದ್ಧ ನಡೆದಾಗ ಅದರ ಪ್ರಭಾವ ಭಾರತದ ಮೇಲಾಗುತ್ತದೆ. ಹಣದುಬ್ಬರ ಹೆಚ್ಚಾಗುತ್ತದೆ ಎಂದು ಹೇಳಿದ್ದನ್ನು ಮಾಳವೀಯ ನೆನಪಿಸಿದ್ದಾರೆ.
ನೆಹರೂ ಅವರ ಆ ಮಾತುಗಳನ್ನು ಜವಾಬ್ದಾರಿಯುತ ನಾಯಕತ್ವ ಎನ್ನುವುದಾದರೆ, ಮೋದಿ ಅವರ ಸಲಹೆಯನ್ನು ವೈಫಲ್ಯ ಎನ್ನಲು ಹೇಗೆ ಸಾಧ್ಯ ಎಂದು ಮಾಳವೀಯ ಪ್ರಶ್ನಿಸಿದ್ದಾರೆ.
*ರಾಹುಲ್ ಗಾಂಧಿ ಹೇಳಿದ್ದೇನು?:*
ತೆಲಂಗಾಣದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಇಂಧನ ಬಳಕೆ ಕಡಿಮೆ ಮತ್ತು ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಗಳನ್ನು ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದರು.
ಪ್ರಧಾನಿಯವರ ಮಾತುಗಳು ಅವರ ಆಡಳಿತಾತ್ಮಕ ವೈಫಲ್ಯದ ಪುರಾವೆ ಎಂದು ರಾಹುಲ್ ಹೇಳಿದ್ದರು.
ಕಳೆದ 12 ವರ್ಷಗಳಲ್ಲಿ ದೇಶವು ಎಂಥಹ ಸ್ಥಿತಿಗೆ ಬಂದು ತಲುಪಿದೆ ಎಂದರೆ, ಜನರು ಏನು ಖರೀದಿಸಬೇಕು. ಎಲ್ಲಿಗೆ ಹೋಗಬೇಕು ಎಂಬುದನ್ನೂ ಸರ್ಕಾರವೇ ನಿರ್ಧರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾನುವಾರ ಹೈದರಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಎದುರಿಸಲು ಕೆಲವು ಸಲಹೆಗಳನ್ನು ನೀಡಿದ್ದರು.
ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವುದು, ಮೆಟ್ರೊ ರೈಲುಗಳ ಬಳಕೆ, ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವುದು. ಕನಿಷ್ಠ ಒಂದು ವರ್ಷದ ಮಟ್ಟಿಗೆ ಚಿನ್ನದ ಖರೀದಿ ಮತ್ತು ವಿದೇಶಿ ಪ್ರವಾಸಗಳನ್ನು ಮುಂದೂಡುವುದು. ಖಾದ್ಯ ತೈಲ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಮಿತಗೊಳಿಸಿ, ನೈಸರ್ಗಿಕ ಕೃಷಿ ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡಬೇಕೆಂದು ಮೋದಿ ಸಲಹೆ ನೀಡಿದ್ದರು.











