ಇತ್ತೀಚಿನ ಸುದ್ದಿ
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ
13/09/2026, 13:29
ಮಂಗಳೂರು(reporterkarnataka.com): ಕರಾವಳಿ ಕ್ಲಸ್ಟರ್ನ ತಂತ್ರಜ್ಞಾನ ಹಾಗೂ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಅನಾವರಣಗೊಳಿಸುವ ಮಹತ್ವದ ವೇದಿಕೆಯಾದ ಮಂಗಳೂರು ಟೆಕ್ನೋವಾಂಜಾ 2026ರ ಆರನೇ ಆವೃತ್ತಿಯು ಇದೇ ಸೆಪ್ಟೆಂಬರ್ 23ರಂದು ನಗರದ ಡಾ. ಟಿ.ಎಂ.ಎ. ಪೈ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಆಯೋಜನೆಗೊಂಡಿದೆ. ರಾಜ್ಯ ಸರ್ಕಾರದ ಬಿಯಾಂಡ್ ಬೆಂಗಳೂರು ಮಹತ್ವಾಕಾಂಕ್ಷಿ ಯೋಜನೆ ಅಡಿಯಲ್ಲಿ, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಜಂಟಿಯಾಗಿ ಈ ವಾರ್ಷಿಕ ವಾಣಿಜ್ಯ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತಿವೆ. ವೇಗವಾಗಿ ಮುನ್ನೆಲೆಗೆ ಬರುತ್ತಿರುವ ಈ ತಂತ್ರಜ್ಞಾನ ಕ್ಲಸ್ಟರ್ ಅನ್ನು ಭಾರತದ ಸಿಲಿಕಾನ್ ಬೀಚ್ (#siliconbeachofIndia) ಎಂದು ಬಿಂಬಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಾರಥ್ಯದಲ್ಲಿ ಈ ಸಮಾವೇಶ ನಡೆಯಲಿದೆ.
ಸಂಘಟಕರ ಪ್ರಕಾರ, ಈ ಬೃಹತ್ ಸಮಾವೇಶದಲ್ಲಿ 600ಕ್ಕೂ ಹೆಚ್ಚು ಪ್ರತಿನಿಧಿಗಳು, 150ಕ್ಕೂ ಅಧಿಕ ನವೋದ್ಯಮಗಳು (ಸ್ಟಾರ್ಟಪ್ಗಳು), 40ಕ್ಕೂ ಹೆಚ್ಚು ಜಾಗತಿಕ ಮಟ್ಟದ ಸಂಪನ್ಮೂಲ ವ್ಯಕ್ತಿಗಳು (ಸ್ಪೀಕರ್ಸ್), 50ಕ್ಕೂ ಅಧಿಕ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿಗಳು) ಹಾಗೂ 20ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ಲಸ್ಟರ್ ತಂತ್ರಜ್ಞಾನ, ಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿರುವುದು, ಭಾರತದ ಸಿಲಿಕಾನ್ ಬೀಚ್ ನಿರ್ಮಾಣದ ಸಂಕಲ್ಪ ಹಾಗೂ ಕರ್ನಾಟಕದ ಕರಾವಳಿ ತಂತ್ರಜ್ಞಾನ ವಲಯದಲ್ಲಿ ಇದು ವಹಿಸುತ್ತಿರುವ ಮಹತ್ವದ ಪಾತ್ರದ ಮೇಲೆ ಸಮಾವೇಶವು ಪ್ರಮುಖವಾಗಿ ಗಮನಹರಿಸಲಿದೆ.
ದಿನಪೂರ್ತಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ರೂಪಾಂತರ, ಉದ್ಯಮಶೀಲತೆ, ಬಂಡವಾಳ ಹೂಡಿಕೆಗಳು, ಇಎಸ್ಡಿಎಂ, ಡೇಟಾ ಕೇಂದ್ರಗಳು ಮತ್ತು ನುರಿತ ಮಾನವ ಸಂಪನ್ಮೂಲದ (ಪ್ರತಿಭೆಗಳ) ಪೂರೈಕೆಯ ಕುರಿತು ಗಹನವಾದ ಚರ್ಚಾಗೋಷ್ಠಿಗಳು ನಡೆಯಲಿವೆ. ಜೊತೆಗೆ ಈ ಭಾಗದಲ್ಲಿ ಹರಿದುಬರುತ್ತಿರುವ ನೂತನ ಹೂಡಿಕೆಗಳು, ನೂತನ ಉತ್ಪನ್ನಗಳು ಹಾಗೂ ಐಪಿ (ಬೌದ್ಧಿಕ ಆಸ್ತಿ) ಅನಾವರಣ, ಉದಯೋನ್ಮುಖ ಸ್ಟಾರ್ಟಪ್ಗಳ ಬೆಳವಣಿಗೆ, ನುರಿತ ಉದ್ಯೋಗಿಗಳ ವಿಸ್ತರಣೆ ಮತ್ತು ಉದ್ಯಮ ಸಹಭಾಗಿತ್ವಗಳನ್ನು ಕೂಡ ಈ ಸಮಾವೇಶ ಮುನ್ನೆಲೆಗೆ ತರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕರ್ನಾಟಕದ ಬಿಯಾಂಡ್ ಬೆಂಗಳೂರು ದೂರದೃಷ್ಟಿಯಡಿ ಮಂಗಳೂರು ನಗರವು ಉದಯೋನ್ಮುಖ ತಂತ್ರಜ್ಞಾನ, ಜ್ಞಾನ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೇಗೆ ರೂಪಾಂತರಗೊಳ್ಳುತ್ತಿದೆ ಎಂಬುದನ್ನು ಇದು ಜಗತ್ತಿಗೆ ಪ್ರದರ್ಶಿಸಲಿದೆ.












