ಇತ್ತೀಚಿನ ಸುದ್ದಿ
ಡಾ.ರಾಜ್ ಸಮಾಧಿ ಕುರಿತು ವಿವಾದಾತ್ಮಕ ಹೇಳಿಕೆ: ನಟ ಚೇತನ್ ಮನೆಗೆ ಮುತ್ತಿಗೆ; ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ
25/04/2026, 21:39
ಬೆಂಗಳೂರು(reporterkarnataka.com): ಕನ್ನಡದ ಮೇರು ನಟ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್ ಕುಮಾರ್ ಸಮಾಧಿ ಜಾಗ ಕುರಿತು ನಾಲಗೆ ಹರಿಬಿಟ್ಟ ನಟ ಚೇತನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟನ ಸಮಾಧಿಗೆ ನೀಡಿದ 2.5 ಏಕರೆ ಜಾಗವನ್ನು ಸಾರ್ವಜನಿಕರಿಗೆ ಬಳಕೆ ಮಾಡಬೇಕು, ಮತಗಳ ಲಾಭದ ಉದ್ದೇಶದಿಂದ ಜಾಗ ಹಂಚಿಕೆ ಎಂದೆಲ್ಲಾ ಪೋಸ್ಟ್ ಹಾಕಿದ್ದ ನಟ ಚೇತನ್ ವಿರುದ್ದ ರಾಜ್ಯದೆಲ್ಲೆಡೆ ಪ್ರತಿಭಟನೆ ತೀವ್ರಗೊಂಡಿದೆ. ಕನ್ನಡ ಹೋರಾಟಗಾರರು ನಟ ಚೇತನ್ ಮನೆಗೆ ಮುತ್ತಿಗೆ ಹಾಕಿದ್ದಾರೆ. ಪರಿಣಾಮ ನಟ ಚೇತನ್ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಸಾರಾ ಗೋವಿಂದ್ ಸೇರಿದಂತೆ ಕನ್ನಡ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ.
ನಟ ಚೇತನ್ ನಿಲುವು, ಪೋಸ್ಟ್ ಹಾಗೂ ಹೇಳಿಕೆಯಿಂದ ಡಾ.ರಾಜ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡ ಹೋರಾಟಗಾರರು ಕೆರಳಿದ್ದಾರೆ. ಚೇತನ್ ಮನೆಗೆ ಆಗಮಿಸಿದ ಸಾರಾ ಗೋವಿಂದ ಸೇರಿದಂತೆ ಹತ್ತಕ್ಕೂ ಹೆಚ್ಚು ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಹೊರಗೆ ಬಂದು ಸಾರ್ವಜನಿಕ ವಾಗಿ ಕ್ಷಮಾಪಣೆ ಕೇಳಬೇಕು ಅಂತಾ ಆಗ್ರಹಿಸಿ ಮನೆಗೆ ಮುತ್ತಿಗೆ ಹಾಕಿದ್ದಾರೆ.
*ಸಾರಾ ಗೋವಿಂದ , ಚೇತನ್ ನಡುವೆ ಮಾತಿನ ಚಕಮಕಿ:*
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮನೆಯಿಂದ ಹೊರಬಂದ ನಟ ಚೇತನ್ ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಸಾರಾ ಗೋವಿಂದ್ ಹಾಗೂ ನಟ ಚೇತನ್ ನಡುವೆ ಮಾತಿನ ಚಕಮಕಿ ನಡೆದಿದೆ. ಏಕವಚನದಲ್ಲೇ ಬೈಗುಳಗಳ ಸುರಿಮಳೆಯಾಗಿದೆ. ಹೋರಾಟಗಾರರು ಮನೆಗೆ ನುಗ್ಗಲು ಯತ್ನಿಸಿದ್ದಾರೆ.
*ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ ಚೇತನ್:*
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನಟ ಚೇತನ್ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ನನ್ನ ಮಾತಿನಿಂದ ನೋವಾಗಿದ್ರೆ ಕ್ಷೇಮೆ ಕೇಳುತ್ತೇನೆ. ಸಾಮಾಜಿಕ ಕಳಕಳಿಯಿಂದ ಮಾತನಾಡಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
*ನಟ ಚೇತನ್ ಹೇಳಿದ್ದೇನು?:*
ನಟನ ಸಮಾಧಿ ಕಾಂಪ್ಲೆಕ್ಸ್ 2.5 ಎಕರೆ ಜಾಗ ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತಾ..? ಎಂದ ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಡಾ.ರಾಜ್ ಸಮಾಧಿಗೆ 2.5 ಎಕರೆ ಜಾಗ ನೀಡುವ ಬದಲು ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು. ಮತಗಳ ಲಾಭದ ಉದ್ದೇಶದಿಂದ ಭೂಮಿ ಹಂಚಿಕೆಯಾಗಬಾರದು ಎಂದು ನಟ ಚೇತನ್ ಹೇಳಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು.












