ಇತ್ತೀಚಿನ ಸುದ್ದಿ
ಶಿವಮೊಗ್ಗದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು: ಮತ್ತೊಬ್ಬ ಆರೋಪಿಗೆ 6 ವರ್ಷ ಸಜೆ
22/04/2026, 11:12
ಶಿವಮೊಗ್ಗ(reporterkarnataka.com): ಶಿವಮೊಗ್ಗ ಜಿಲ್ಲೆಯ ತುಂಗಾ ತೀರದಲ್ಲಿ ನಡೆದಿದ್ದ ಭೀಕರ ಸ್ಫೋಟದ ತಾಲೀಮು (ಟ್ರಯಲ್ ಬ್ಲಾಸ್ಟ್) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ (NIA) ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಮೂರನೇ ಅಪರಾಧಿ ಅರಾಫತ್ ಅಲಿಗೆ ನ್ಯಾಯಾಲಯವು 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (NIA), ಅರಾಫತ್ ಅಲಿ ವಿರುದ್ಧ ಗಂಭೀರ ಸಾಕ್ಷ್ಯಾಧಾರಗಳನ್ನು ಕಲೆಹಾಕಿತ್ತು. ನಿಷೇಧಿತ ಐಸಿಸ್ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅರಾಫತ್, ದೇಶವಿರೋಧಿ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದನು.
ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೆ, ಸ್ಥಳೀಯ ಯುವಕರನ್ನು ದಾರಿ ತಪ್ಪಿಸಿ ಸಂಘಟನೆಯತ್ತ ಸೆಳೆಯುತ್ತಿದ್ದ ಗಂಭೀರ ಆರೋಪ ಈತನ ಮೇಲಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅರಾಫತ್ ಅಲಿ ಮೇಲಿನ ದೋಷಾರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಿದ್ದಾರೆ.
ಈ ಭಯೋತ್ಪಾದಕ ಸಂಚಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಒಟ್ಟು 12 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಪೈಕಿ ಈಗಾಗಲೇ ಇಬ್ಬರು ಆರೋಪಿಗಳಿಗೆ ತಲಾ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಅರಾಫತ್ ಅಲಿ ಶಿಕ್ಷೆಗೊಳಗಾದ ಮೂರನೇ ವ್ಯಕ್ತಿಯಾಗಿದ್ದಾನೆ.
ಉಳಿದ 9 ಮಂದಿ ಆರೋಪಿಗಳ ವಿರುದ್ಧದ ವಿಚಾರಣೆಯು ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದ್ದು, ಪ್ರಕರಣದ ಅಂತಿಮ ಹಂತದ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ. ದೇಶದ ಭದ್ರತೆಗೆ ಧಕ್ಕೆ ತರುವ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಸಂದೇಶವಾಗಿದೆ.












