ಇತ್ತೀಚಿನ ಸುದ್ದಿ
ಸರಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ: ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಗೆ ಗೆಲುವು
11/09/2026, 21:21
ಮಂಗಳೂರು(reporterkarnataka.com): ಕರಾವಳಿಯ ಶೈಕ್ಷಣಿಕ ಕೇಂದ್ರ ಮಂಗಳೂರಿನಲ್ಲಿ ನಡೆದ ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಈಗ ರಾಜ್ಯ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟುಮಾಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲಿತ ಅಭ್ಯರ್ಥಿಗಳು, ಸರ್ಕಾರದ ಆದೇಶಕ್ಕೆ ನೇರ ಠಕ್ಕರ್ ನೀಡಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.
*ಸರ್ಕಾರದ ಮಾಸ್ಟರ್ ಪ್ಲಾನ್ ಮತ್ತು ಕೊನೇ ಕ್ಷಣದ ಆದೇಶ!*
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಿಗದಿಯಾಗಿತ್ತು. ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ನಿಯಮದಂತೆ, ತರಗತಿ ಪ್ರತಿನಿಧಿಗಳು ಮತದಾನ ಮಾಡುವ ‘ಪರೋಕ್ಷ ಮತದಾನ’ ಪದ್ಧತಿಯಲ್ಲಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಪರೋಕ್ಷ ಚುನಾವಣೆ ನಡೆದರೆ ಎಬಿವಿಪಿ ಬೆಂಬಲಿತರೇ ಗೆದ್ದು ಬೀಗಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ, ಆಡಳಿತಾರೂಢ ಸರ್ಕಾರ ಮತ್ತು ಸಚಿವರಿಂದ ಚುನಾವಣೆ ತಡೆಯಲು ಅಥವಾ ಮುಂದೂಡಲು ವಿಶ್ವವಿದ್ಯಾಲಯದ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.
*ಸರ್ಕಾರಕ್ಕೆ ಠಕ್ಕರ್!*
ಈ ಚುನಾವಣೆಯನ್ನು ಹೇಗಾದರೂ ಮಾಡಿ ತಡೆಯಲು ತರಾತುರಿಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ ಸರ್ಕಾರ, ನಿನ್ನೆ ರಾತ್ರೋರಾತ್ರಿ ರಾಜ್ಯಾದ್ಯಂತ ಕಾಲೇಜು ಚುನಾವಣೆಗೆ ಹೊಸ ನಿಯಮ ಜಾರಿಗೆ ತಂದು ಆದೇಶ ಹೊರಡಿಸಿತು. ಇನ್ಮುಂದೆ ಪರೋಕ್ಷ ಚುನಾವಣೆ ಬೇಡ, ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಮತ ಚಲಾಯಿಸುವ ‘ನೇರ ಚುನಾವಣೆ’ ನಡೆಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಲಾಯಿತು. ಈ ಮೂಲಕ ಇಂದಿನ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.
*ಸರಕಾರಿ ಆದೇಶಕ್ಕೆ ಬೆಲೆ ಕೊಡದ ವಿವಿ: ಕಾನೂನುಬದ್ಧ ವಾದ!*
ಆದರೆ, ಸರ್ಕಾರದ ಈ ತರಾತುರಿಯ ಆದೇಶಕ್ಕೂ ಮತ್ತು ಸಚಿವರ ರಾಜಕೀಯ ಒತ್ತಡಕ್ಕೂ ಮಂಗಳೂರು ವಿಶ್ವವಿದ್ಯಾಲಯ ಮಣಿಯಲಿಲ್ಲ. ಸೆಪ್ಟೆಂಬರ್ 10 ರಂದು ಸರ್ಕಾರಿ ಆದೇಶ ಬರುವುದಕ್ಕಿಂತ ಮುಂಚಿತವಾಗಿಯೇ ಮಂಗಳೂರು ವಿವಿ ಕಾಲೇಜಿನ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿತ್ತು. ನಿಯಮಾವಳಿಗಳ ಪ್ರಕಾರ ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಮೇಲೆ ಮಧ್ಯದಲ್ಲಿ ಬಂದ ಹೊಸ ಆದೇಶಗಳನ್ನು ಅನ್ವಯಿಸಲು ಬರುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ನಾಯಕರು ಪ್ರಬಲವಾಗಿ ವಾದಿಸಿದರು. ಸರ್ಕಾರದ ಕಡೆಯಿಂದ ಎಷ್ಟೇ ಒತ್ತಡ ಬಂದರೂ, ವಿಶ್ವವಿದ್ಯಾಲಯವು ನಿಗದಿತ ವೇಳಾಪಟ್ಟಿಯಂತೆಯೇ ಪರೋಕ್ಷ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.
*ಎಬಿವಿಪಿ ಭರ್ಜರಿ ಜಯಭೇರಿ ಹಾಗೂ ವಿಜಯೋತ್ಸವ!*
ಪರೋಕ್ಷ ಮತದಾನದ ಮೂಲಕ ನಡೆದ ಈ ರೋಚಕ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿ ಬೀಗಿದ್ದಾರೆ. ಸರ್ಕಾರದ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ಆದೇಶದ ನಡುವೆಯೂ ಎಬಿವಿಪಿ ತನ್ನ ಪದಾಧಿಕಾರಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.












