ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣ: ಗೋವಾದಲ್ಲಿ ಸಿಕ್ಕಿಬಿದ್ದ ಬಿಹಾರದ ಆರೋಪಿ
12/06/2026, 19:10
ಮಂಗಳೂರು(reporterkarnataka.com): ಮಂಗಳೂರಿನ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯನ್ನು ಗೋವಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಚಲನವಲನದ ಬಗ್ಗೆ ಮಾಹಿತಿ ಸಿಕ್ಕ ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರದ ದರ್ಬಾಂಗ ಜಿಲ್ಲೆಯ ಶಿವಾಜಿನಗರ ನಿವಾಸಿ ಪ್ರಶಾಂತ್ ಕುಮಾರ್ ಭಂಡಾರಿ (36) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಶಾಂತ್, ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಗೋವಾಕ್ಕೆ ಪಲಾಯನ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮಂಗಳೂರು ಪೊಲೀಸರಿಗೆ ಸಿಕ್ಕಿತ್ತು. ಕರ್ನಾಟಕದ ಉನ್ನತಾಧಿಕಾರಿಗಳು ತಕ್ಷಣವೇ ಈ ತಾಂತ್ರಿಕ ಮಾಹಿತಿಯನ್ನು ಗೋವಾ ಪೊಲೀಸರಿಗೆ ರವಾನಿಸಿ ಅಲರ್ಟ್ ಮಾಡಿದ್ದರು.ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ದಕ್ಷಿಣ ಗೋವಾದ ಕೊಂಕಣ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ, ಮಡಗಾಂವ್ (Margao) ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಜಾಗ್ರತೆ ವಹಿಸಿದರು. ರೈಲು ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆ ಸಿಸಿಟಿವಿ ಕಣ್ಗಾವಲು, ತಾಂತ್ರಿಕ ವಿಶ್ಲೇಷಣೆ ಮತ್ತು ಗುಪ್ತಚರ ಮಾಹಿತಿಯ ನೆರವಿನಿಂದ ಶಂಕಿತ ವ್ಯಕ್ತಿಯನ್ನು ನಿಖರವಾಗಿ ಗುರುತಿಸಿದ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ.













