ಇತ್ತೀಚಿನ ಸುದ್ದಿ
ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ
11/06/2026, 20:13
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರಿನಲ್ಲಿ ಕಳೆದ ಕೆಲವು ದಿನಗಳಿಂದ ಜನ ಜಾನುವಾರುಗಳಿಗೆ ಕಾಟ ನೀಡುತ್ತಿದ್ದ ಹುಲಿಯು ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಸುಮಾರು ೩-೪ ವರ್ಷದ ಹೆಣ್ಣು ಹುಲಿ ಇದಾಗಿದ್ದು, ಹುಲಿ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಹುಲಿಯು ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತಲ್ಲದೆ. ಜಾನುವಾರುಗಳನ್ನು ಕೊಂದು ಹಾಕಿ ಆತಂಕ ಸೃಷ್ಟಿಮಾಡಿತ್ತು. ರೈತರು ಈ ಭಾಗದಲ್ಲಿ ಓಡಾಡಲು ಹೆದರುತ್ತಿದ್ದರಲ್ಲದೆ ಸಂಜೆ ನಂತರ ಓಡಾಡುವುದನ್ನು ನಿಲ್ಲಿಸಿದ್ದರು. ಗ್ರಾಮಸ್ಥರು ಹಾಗೂ ಮಾಜಿ ಶಾಸಕ ಮಂಜುನಾಥ ಅವರು ಕೂಡ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು.
ಪರಿಣಾಮ ಅರಣ್ಯ ಇಲಾಖೆ ಹುಲಿ ಪತ್ತೆ ಕಾರ್ಯಾಚರಣೆಗೆ 10 ಸಿಸಿ ಕ್ಯಾಮೆರಾ ಅಳವಡಿಸಿದ್ದರು ಅಲ್ಲದೆ ಅದರ ಚಲನ ವಲನ ಗಮನಿಸಿ ಮಂಜುನಾಥ್ ಅವರ ತೋಟದಲ್ಲಿ ತಿಂಗಳ ಹಿಂದೆ ಬೋನು ಅಳವಡಿಸಿ ಅದರೊಳಗೆ ಮೇಕೆಯೊಂದನ್ನು ಕಟ್ಟಿದ್ದರು.
ಬುಧವಾರ ಬೆಳಗಿನ ಜಾವ ಹುಲಿ ಮೇಕೆಯನ್ನು ಬೇಟೆಯಾಡಲು ಬಂದು ಬೋನಿನಲ್ಲಿ ಬಂಧಿಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿ.ಸಿ.ಎಫ್. ಆರ್.ಟಿ.ಕಿರುಬನಂತನ್, ಆರ್.ಎಫ್.ಒ.ಸಂತೋಷ್ ಹೂಗಾರ್ ನೇತ್ರತ್ವದ ತಂಡವು ಆಗಮಿಸಿತು. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನಂತರ ಬೋನ್ನಿಂದ ಹೊರ ತೆಗದು ಚಿಕಿತ್ಸೆ ನೀಡಿದರು. ಹೆಣ್ಣು ಹುಲಿಯು 106 ಕೆಜಿ ಇದ್ದು, ಹಲ್ಲುಗಳು ಸವೆದಿರಲಿಲ್ಲ. ಆರೋಗ್ಯವಾಗಿತ್ತು ಎಂದು ತಿಳಿದುಬಂದಿದೆ. ನಂತರ ವಾಹನದಲ್ಲಿ ಕೊಂಡ್ಯೊಯ್ದು ಮೈಸೂರಿನ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಡಿಆರ್ಎಫ್ಒಗಳಾದ ದಿವಾಕರ್, ಮಂಜುನಾಥ್, ಆನೆ ಕಾರ್ಯಪಡೆಯ ಡಿಆರ್ಎಫ್ಓ ಚಂದ್ರೇಶ್, ಸಿಬ್ಬಂದಿಗಳಾದ ಶಿವಪ್ಪ, ಸಿದ್ದಪ್ಪ, ಉದಯ್, ಇಟಿಎಫ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆಂದು ತಿಳಿದು ಬಂದಿದೆ.













