ಇತ್ತೀಚಿನ ಸುದ್ದಿ
ಇಷ್ಟವಿಲ್ಲದ ಮದುವೆ?: 4 ತಿಂಗಳಲ್ಲಿ ‘ನವದಂಪತಿ’ ಸಾವಿಗೆ ಶರಣು: ಪತ್ನಿಯ ಸಾವಿನ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ
14/07/2026, 21:27
ತುಮಕೂರು(reporterkarnataka.com):ಮದುವೆಯಾದ ಕೇವಲ 4 ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ತುಮಕೂರು ಬಳಿಯ ಶಿರಾ ಸಮೀಪ ನಡೆದಿದೆ.
ಶಿರಾ ತಾಲೂಕಿನ ಹನುಮನಹಳ್ಳಿ ಗ್ರಾಮದ ಶರಣ್ಯ(20) ಹಾಗೂ ಗಿರೀಶ್(28) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಇವರಿಬ್ಬರ ವಿವಾಹ ಅತ್ಯಂತ ಸಡಗರದಿಂದ ನೆರವೇರಿತ್ತು.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ಪತ್ನಿ ಶರಣ್ಯ ಮೊದಲು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತ ಕೆಲಸ ಮುಗಿಸಿ ಮನೆಗೆ ಬಂದ ಪತಿ ಗಿರೀಶ್ಗೆ ಪತ್ನಿಯ ಶವ ಕಂಡು ತೀವ್ರ ಆಘಾತಗೊಂಡು ತಕ್ಷಣವೇ ಗ್ರಾಮದ ಹೊರವಲಯದ ಹೊಲಕ್ಕೆ ಓಡಿ ಹೋಗಿ ಅಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ತಾನೂ ಪ್ರಾಣ ಬಿಟ್ಟಿದ್ದಾರೆ.
ನಾಲ್ಕು ತಿಂಗಳ ಸಂಸಾರ ಹೀಗೆ ದಿಢೀರ್ ಅಂತ್ಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಾಮೀಣ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಶರಣ್ಯಾಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆಕೆಗೆ ಇಷ್ಟ ಇಲ್ಲದಿದ್ದರೂ ಆಕೆಯ ಸೋದರಮಾವನೇ ಆಗಿದ್ದ ಗಿರೀಶ್ ಜೊತೆ ಕುಟುಂಬಸ್ಥರು ಮದುವೆ ಮಾಡಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಮನಸ್ತಾಪ ಇಬ್ಬರ ಆತ್ಮಹತ್ಯೆಗೆ ಕಾರಣವಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.













