ಇತ್ತೀಚಿನ ಸುದ್ದಿ
Bangalore | ಬಿಡದಿಯಲ್ಲಿ ಸಿಟ್ಟಿಗೆದ್ದ ರೈತರು: ಸರ್ವೇಗೆ ಬಂದ ಅಧಿಕಾರಿಗಳಿಗೆ ಪೊರಕೆ ಸೇವೆ, ಕಲ್ಲು ತೂರಾಟ
13/07/2026, 18:04
ಬೆಂಗಳೂರು(reporterkarnataka.com): ಬಿಡದಿ ಸ್ಮಾರ್ಟ್ ಟೌನ್ಶಿಪ್ ನಿರ್ಮಾಣ ಯೋಜನೆಯ ವಿರುದ್ಧ ಆಕ್ರೋಶಗೊಂಡ ರೈತರು ಸರ್ವೇಗೆ ಬಂದ ಅಧಿಕಾರಿಗಳಿಗೆ ಪೊರಕೆ ಹಿಡಿದು ಕಲ್ಲು ತೂರಾಟ ನಡೆಸಿದ್ದಾರೆ.
ಬಿಡದಿ ಸ್ಮಾರ್ಟ್ ಟೌನ್ಶಿಪ್ ನಿರ್ಮಾಣ ಯೋಜನೆಯ ವಿರುದ್ಧ ರೈತರ ಆಕ್ರೋಶದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ.



ಜಂಟಿ ಮಾರುಕಟ್ಟೆ ಸಮಿತಿ ಅಧಿಕಾರಿಗಳ ಸರ್ವೆ ಕಾರ್ಯವನ್ನು ಖಂಡಿಸಿ, ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲದಲ್ಲಿ ರೈತರು ಹಾಗೂ ಬೃಹತ್ ಸಂಖ್ಯೆಯ ರೈತ ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸರ್ವೆಗೆ ಬಂದ ಅಧಿಕಾರಿಗಳ ಕಾರ್ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ರೈತರು ಅಧಿಕಾರಿಗಳ ಕಾರ್ ಮೇಲೆ ಪೊರಕೆಗಳಿಂದ ಹೊಡೆದು ಪ್ರತಿಭಟಿಸಿದ್ದಾರೆ.
*ಮಹಿಳೆಯರಿಂದ ‘ಪೊರಕೆ ಚಳವಳಿ’*
ಈ ಇಡೀ ಪ್ರತಿಭಟನೆಯಲ್ಲಿ ರೈತ ಮಹಿಳೆಯರೇ ಮುಂಚೂಣಿಯಲ್ಲಿದ್ದು, ಅಧಿಕಾರಿಗಳ ಜೆಎಂಸಿ (JMC) ಸರ್ವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ನಮ್ಮ ಜೀವ ಹೋದರೂ ತಲತಲಾಂತರದಿಂದ ನಂಬಿ ಬದುಕಿದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅಧಿಕಾರಿಗಳು ಬಲವಂತವಾಗಿ ಸರ್ವೆ ಮಾಡಲು ಬಂದರೆ ಪೊರಕೆಯಿಂದಲೇ ತಕ್ಕ ಪಾಠ ಕಲಿಸುತ್ತೇವೆ” ಎಂದು ಮಹಿಳೆಯರು ಆಕ್ರೋಶದ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರತಿಭಟನಾ ನಿರತ ರೈತರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಯೋಜನೆ ಕೈಬಿಡುವವರೆಗೂ ಕದಲಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
*ಬಿಡದಿ – ಹಾರೋಹಳ್ಳಿ ರಸ್ತೆ ಸಂಪೂರ್ಣ ಬಂದ್*
ಟೌನ್ಶಿಪ್ ನೆಪದಲ್ಲಿ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿರುವ ನೂರಾರು ರೈತರು, ಕೈಯಲ್ಲಿ ಪೊರಕೆಗಳನ್ನು ಹಿಡಿದು ಬಿಡದಿ – ಹಾರೋಹಳ್ಳಿ ಮುಖ್ಯ ರಸ್ತೆಯ ಮಧ್ಯದಲ್ಲೇ ಕುಳಿತು ಧರಣಿ ಆರಂಭಿಸಿದರು. ರೈತರ ಈ ದಿಢೀರ್ ರಸ್ತೆ ತಡೆ ಚಳವಳಿಯಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.












