ಇತ್ತೀಚಿನ ಸುದ್ದಿ
ಶಿಡ್ಲಘಟ್ಟ | ರಾಸುಗಳನ್ನು ಜಿಲ್ಲಾಡಳಿತ ಭವನಕ್ಕೆ ನುಗ್ಗಿಸಲು ಯತ್ನ: ರೈತರು-ಪೊಲೀಸರ ಜಟಾಪಟಿ
29/04/2026, 18:12
ಶಿಡ್ಲಘಟ್ಟ(reporterkarnataka.com):ಕೈಗಾರಿಕೆಗಳಿಗಾಗಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂಮಿ ಸ್ವಾಧೀನ ವಿರೋಧಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 45 ದಿನ ತಲುಪಿದೆ.
ಬುಧವಾರ ಜಿಲ್ಲಾಡಳಿತ ಭವನಕ್ಕೆ ರಾಸುಗಳನ್ನು ನುಗ್ಗಿಸಲು ರೈತರು ಮುಂದಾದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ, ಜಟಾಪಟಿ ನಡೆಯಿತು.
ರೈತ ಭರತ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಬ್ಯಾರಿಕೇಡ್ ಕಿತ್ತು ಎಸೆದು ಜಿಲ್ಲಾಡಳಿತ ಭವನ ಪ್ರವೇಶಿಸಲು ರೈತರು ಮುಂದಾದರು.
ಭವನದ ಮುಂಭಾಗದ ಗೇಟ್ ಮುಚ್ಚಲಾಯಿತು. ಜಿಲ್ಲಾಡಳಿತ ಭವನದೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ಅವರು ಸಭೆಗೆ ಬರುವ ಸಮಯದಲ್ಲಿಯೇ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿವೆ.
ಎಸ್ಪಿ, ಎಎಸ್ ಪಿ, ಡಿವೈಎಸ್ ಪಿ ಸೇರಿದಂತೆ ಅಪಾರ ಸಂಖ್ಯೆಯ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
45 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಡಿಪಿ ಸಭೆ ನಡೆಸಿ ಸಚಿವರು ಹೊರ ಬರುವುದನ್ನು ರೈತರು ಕಾಯುತ್ತಿದ್ದು ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.












