11:51 PM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಪಾತಾಳ ವೆಂಕಟರಮಣ ಭಟ್‌ಗೆ ಶೇಣಿ ಪ್ರಶಸ್ತಿ ಪ್ರದಾನ

15/08/2024, 23:20

ಮಂಗಳೂರು(reporterkarnataka.com): ಶೇಣಿ ಪ್ರಶಸ್ತಿ ನನ್ನ ಪಾಲಿಗೆ ದೇವರ ಪ್ರಸಾದಕ್ಕೆ ಸಮನಾದುದು. ಈ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಶೇಣಿ ಗೋಪಾಲಕೃಷ್ಣ ಭಟ್ ಅವರ ಜತೆ ಒಡನಾಟ ಹೊಂದಿ ಕಲಾಮಾತೆಯ ಸೇವೆ ಮಾಡಿದ್ದರಿಂದ ಈ ಪ್ರಶಸ್ತಿ ನನಗೆ ಒಲಿದಿರಬಹುದು ಎಂದು ಭಾವಿಸುವುದಾಗಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅಭಿಪ್ರಾಯಪಟ್ಟರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶೇಣಿ ಪ್ರಶಸ್ತಿ-2024 ಸ್ವೀಕರಿಸಿ ಮಾತನಾಡಿದರು.
ಶೇಣಿ ಜತೆಗಿನ ಒಡನಾಟವನ್ನು ಸ್ಮರಿಸಿದ ಅವರು, ಆಟ-ಕೂಟಗಳಲ್ಲಿ ಶೇಣಿಯವರು ಇದ್ದರೆ ಸಹಕಲಾವಿದರು ಬಹಳ ಎಚ್ಚರಿಕೆಯಿಂದ ಅರ್ಥ ಹೇಳಬೇಕಿತ್ತು. ಅವರು ಸಹಕಲಾವಿದರ ಜತೆ ಪಾತ್ರಕ್ಕೆ ಒದಗುವ ಬಗೆ ಅಸಾಮಾನ್ಯವಾಗಿತ್ತು. ಹರಿದಾಸರಾಗಿದ್ದ ಅವರಿಂದ ಯಕ್ಷಗಾನದ ಮಾತುಗಾರಿಕೆಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಲಭಿಸಿದೆ. ಅವರಂಥ ಕಲಾವಿದರು ಇನ್ನಷ್ಟು ಹುಟ್ಟಿಬರಬೇಕು ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಚಾಲನೆ ನೀಡಿದರು. ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಮಹಾನ್ ಕಲಾವಿದ ಎಂದು ಅವರು ಹೇಳಿದರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹಿರಿಯ ಹೋಟೆಲ್ ಉದ್ಯಮಿ ಜಯಪ್ರಕಾಶ್ ರಾವ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಹಿರಿಯ ಚಿಂತಕ ನಿತ್ಯಾನಂದ ಕಾರಂತ ಶುಭಾಶಂಸನೆ ಮಾಡಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಜಿ.ಕೆ.ಭಟ್ ಸೇರಾಜೆ ಶೇಣಿ ಸಂಸ್ಮರಣೆ ಮತ್ತು ಪಾತಾಳ ಅಭಿನಂದನಾ ನುಡಿಗಳನ್ನಾಡಿದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಕೂಡ್ಲು ಉಪಸ್ಥಿತರಿದ್ದರು. ಹಿರಿಯ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು