ಇತ್ತೀಚಿನ ಸುದ್ದಿ
Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು ಗುಂಡು
28/07/2026, 18:50
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅಕ್ರಮವಾಗಿ ಕಾಡುಹಂದಿಗಳನ್ನು ಬೇಟೆಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಅನ್ವಿತ್ ಬಂಧಿತ ಆರೋಪಿ. ಈತನ ಕಾಲಿಗೆ ಗುಂಡು ಬಿದ್ದಿದೆ. ಜೊತೆಗೆ ಬಂದಿದ್ದ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರ್ಶನ್, ಮಂಜು ಮತ್ತು ಕಿರಣ್ ಪರಾರಿಯಾದ ಆರೋಪಿಗಳು.
ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಆಲ್ಟೋ ಕಾರನ್ನು ಸಿಬ್ಬಂದಿ ತಡೆದು ತಪಾಸಣೆ ನಡೆಸಲು ಯತ್ನಿಸಿದಾಗ, ಕಾರಿನಲ್ಲಿದ್ದ ನಾಲ್ವರು ಆರೋಪಿಗಳು ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಜಾಗರೂಕರಾಗಿ ಗುಂಡು ಹಾರಿಸಿ ಅನ್ವಿತ್ನನ್ನು ಸೆರೆಹಿಡಿದಿದ್ದಾರೆ. ಪರಾರಿಯಾದವರಿಗಾಗಿ ಶೋಧ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ಬೇಟೆಗಾರರಿಂದ ಎರಡು ಕಾಡುಹಂದಿಗಳ ಮೃತದೇಹ, ಒಂದು ಮಚ್ಚು, ಎರಡು ಟಾರ್ಚ್ಗಳು, ಒಂದು ಟಾರ್ಪಲ್, ಒಂದು ಮೊಬೈಲ್ ಫೋನ್ ಹಾಗೂ ಅಕ್ರಮ ಸಾಗಾಟಕ್ಕೆ ಬಳಸಿದ್ದ ಆಲ್ಟೋ ಕಾರನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.













