ಇತ್ತೀಚಿನ ಸುದ್ದಿ
Mangaluru | ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಕೃತಿ ಬಿಡುಗಡೆ; ವಿಚಾರ ಸಂಕಿರಣ
06/08/2026, 20:40
ಮಂಗಳೂರು(reporterkarnataka.com): ಅಂಡಮಾನ್ನ ಇತಿಹಾಸದ ಕತ್ತಲು ಅಧ್ಯಾಯಗಳ ನಡುವೆ ಮಾನವೀಯತೆ, ಸಾಮಾಜಿಕ ಪರಿವರ್ತನೆ ಹಾಗೂ ತಾಯಂದಿರು ಮತ್ತು ಅಕ್ಕಂದಿರ ಹೋರಾಟವನ್ನು ದಾಖಲಿಸುವ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಕೃತಿಯ ಬಿಡುಗಡೆ ಹಾಗೂ ವಿಶೇಷ ವಿಚಾರ ಸಂಕಿರಣ ಮಂಗಳೂರಿನಲ್ಲಿ ನಡೆಯಲಿದೆ.
ಮಂಗಳೂರಿನ ಅನೇಕಾಂತ ಫೌಂಡೇಶನ್ ಟ್ರಸ್ಟ್ ಹಾಗೂ ಕರಾವಳಿ ಲೇಖಕಿಯರ ವಾಚಕೀಯರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಕುಂತಲಾ ಶಿವರಾಮ್ ಅವರು ಮೂಲತಃ ಇಂಗ್ಲಿಷ್ನಲ್ಲಿ ರಚಿಸಿರುವ ಕೃತಿಯನ್ನು ಸಮಾಜಮುಖಿ ಚಿಂತಕಿ ಡಾ. ರಾಜಲಕ್ಷ್ಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ.


ಸಾಂಪ್ರದಾಯಿಕ ಇತಿಹಾಸದ ನಿರೂಪಣಾ ಕ್ರಮಕ್ಕಿಂತ ಭಿನ್ನವಾಗಿ, ಮಾನವೀಯ ನೆಲೆಯಲ್ಲಿ ಸಮಾಜವನ್ನು ರೂಪಿಸಿದ ನಾಗರಿಕತೆಯ ಬೆಳವಣಿಗೆಯನ್ನು ಕೃತಿ ಪರಿಚಯಿಸುತ್ತದೆ. ಅಂಡಮಾನ್ನ ಕಠಿಣ ಸಾಮಾಜಿಕ ವಾಸ್ತವಗಳ ನಡುವೆ ಮಾನವೀಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಿಳೆಯರ ಹೋರಾಟ ಮತ್ತು ಬದುಕಿನ ವಿವಿಧ ಆಯಾಮಗಳನ್ನು ಕೃತಿ ದಾಖಲಿಸುತ್ತದೆ.
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಇತಿಹಾಸ ವಿಭಾಗದ ಪ್ರೊ. ವಿಜಯ ಪೂಣಚ್ಛ ತಂಬಂಡ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಸರಕಾರಿ ಪದವಿಪೂರ್ವ ಕಾಲೇಜು, ಚೇಳ್ಯಾರಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಚೇಳ್ಯಾರು ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊ. ಗಣಪತಿ ಗೌಡ ಎಸ್. ಅವರು ಕೃತಿಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯವಂತ ನಾಯಕ್ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶಕುಂತಲಾ ಟಿ. ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.












