ಇತ್ತೀಚಿನ ಸುದ್ದಿ
ಕಿತ್ತು ಹೋದ ಛಾವಣಿ, ಶಿಥಿಲಗೊಂಡು ಕಂಬ, ಬಿರುಕುಬಿಟ್ಟು ಗೋಡೆ: ಇದು ಅಗತೀರ್ಥ ಸರಕಾರಿ ಶಾಲೆಯ ದುಸ್ಥಿತಿ
09/12/2021, 19:13
ಕವಿತಾ ಚಂಗಪ್ಪ ಹುಣಸಗಿ ಯಾದಗಿರಿ
info.reporterkarnataka@gmail.com
ಶಿಥಿಲಗೊಂಡ ಕಂಬಗಳು, ಬಿರುಕು ಬಿಟ್ಟ ಗೋಡೆ, ಕಿತ್ತು ಹೋದ ಛಾವಣಿ, ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ಬೆಂಚು ಕುರ್ಚಿಗಳಿಲ್ಲ.





ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಇಲ್ಲಿ 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ನಡೆಯುತ್ತದೆ. ಒಟ್ಟು 60 ಮಕ್ಕಳಿದ್ದಾರೆ. 3 ಮಂದಿ ಶಿಕ್ಷಕರಿದ್ದಾರೆ. ಆದರೆ ಗುಣಮಟ್ಟದ ಶಿಕ್ಷಣ ಇಲ್ಲಿನ ಮಕ್ಕಳಿಗೆ ಸಿಗುತ್ತಿಲ್ಲ.
ಸುರಪುರ ವಿಧಾನಸಭೆಗೆ ಕ್ಷೇತ್ರ ವ್ಯಾಪ್ತಿಗೆ ಸೇರಿದ ಅಗತೀರ್ಥ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಶಾಲೆ ಇದೆ. ಇರುವ 60 ಮಕ್ಕಳು ಕೂಡ ತೀರಾ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹಿಂದುಳಿದ ಮತ್ತು ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ಶಾಲಾ ಕಟ್ಟಡ ನಿರ್ವಹಣೆ ಇಲ್ಲದೆ, ಸುಣ್ಣ ಬಣ್ಣ ಕಾಣದೆ 300 ವರ್ಷದ ಹಿಂದಿನ ಪಳಿಯುಳಿಕೆ ತರಹ ಭಾಸವಾಗುತ್ತಿದೆ. ನಮ್ಮ ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ದ್ಯೋತಕ ಎಂಬಂತೆ ಇದು ಕಾಣುತ್ತದೆ.
ಶಾಲಾ ಕಟ್ಟಡ ಗೋಡೆಗಳೆಲ್ಲ ಬಿರುಕು ಬಿಟ್ಟಿವೆ. ಕಂಬಗಳು ಶಿಥಿಲಗೊಂಡಿದೆ. ಛಾವಣಿ ಯಾವುದೇ ಸಂದರ್ಭದಲ್ಲಿ ಕುಸಿಯುವ ಸ್ಥಿತಿಯಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆಯುತ್ತಾರೆ. ಶಾಲೆಯಲ್ಲಿರುವ 60 ಮಕ್ಕಳ ಪೈಕಿ ಅರ್ಧದಷ್ಟು ಹೆಣ್ಮಕ್ಕಳಿದ್ದರೂ ಶಾಲೆಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಇಲ್ಲ. ಶಾಲೆ ಇರುವ ಊರಿಗೆ ಕೇವಲ ಎರಡು ಬಸ್ ಗಳ ವ್ಯವಸ್ಥೆ ಮಾತ್ರ ಇದೆ.



ಶಾಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದಿದ್ದರೂ ಕಾಲ ಕಾಲಕ್ಕೆ ಬೋಗಸ್ ಬಿಲ್ ಸೃಷ್ಟಿಸಿ ಹಣ ಕೊಳ್ಳೆ ಹೊಡೆಯುವ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಹಣ ಹೊಡೆಯುವ ಖದೀಮರ ಜತೆ ಕೆಲವು ಸ್ಥಳೀಯರು ಕೈಜೋಡಿಸಿದ ಬಗ್ಗೆ ಗುಮಾನಿಯೂ ಇದೆ. ಸ್ಥಳೀಯ ಜನಪ್ರತಿನಿಧಿಗಳು, ಸರಕಾರ ಇನ್ನಾದರೂ ಎಚ್ಚೆತ್ತು ಬಡ ಮಕ್ಕಳು ಕಲಿಯುವ ಈ ಶಾಲೆಗೆ ಕಾಯಕಲ್ಪ ನೀಡಬೇಕೆನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.














