ಇತ್ತೀಚಿನ ಸುದ್ದಿ
ಬೆಂಗಳೂರಿಗೆ ಪ್ರವಾಸಿಗಳಂತೆ ಬಂದು ಶ್ರೀಗಂಧ ಕಳ್ಳ ಸಾಗಣೆ ಮಾಡುವ ಕೇರಳ ಸ್ಮಗ್ಲರ್ಸ್; ಭರ್ಜರಿ 82 ಕೆಜಿ ಗಂಧ ಜಪ್ತಿ
22/07/2026, 16:25
ಬೆಂಗಳೂರು(reporterkarnataka.com): ರಾಜ್ಯದ ಗಡಿ ದಾಟಿ ಶ್ರೀಗಂಧದ ಕಳ್ಳಸಾಗಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕೇರಳದಿಂದ ಪ್ರವಾಸಿಗರಂತೆ ನಟಿಸಿ ಟ್ರಾಲಿ ಬ್ಯಾಗ್ಗಳಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ,ಲಕ್ಷಾಂತರ ರೂಪಾಯಿ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
*ಪ್ರವಾಸಿಗರ ವೇಷದಲ್ಲಿ ಕಳ್ಳಸಾಗಾಟ:*
ಬಂಧಿತ ಆರೋಪಿಗಳನ್ನು ಕೇರಳ ಮೂಲದ ಅಬ್ದುಲ್ ರೆಹಮಾನ್, ಮೊಹಮದ್ ಶಾನ್, ವಿನು ಅಂತೋಣಿ ಹಾಗೂ ಜಾಫರ್ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಶ್ರೀಗಂಧವನ್ನು ಸಾಗಿಸಲು ಅತ್ಯಂತ ಚಾಣಾಕ್ಷ ದಾರಿಯನ್ನು ಆಯ್ದುಕೊಂಡಿತ್ತು. ಅಂತರರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ವಾಹನಗಳನ್ನು ತೀವ್ರವಾಗಿ ತಪಾಸಣೆ ನಡೆಸುತ್ತಾರೆ ಎಂಬ ಕಾರಣಕ್ಕೆ, ಇವರು ಪ್ರವಾಸಿಗರ ರೀತಿ ವರ್ತಿಸುತ್ತಿದ್ದರು.

ಶ್ರೀಗಂಧದ ಮರಗಳನ್ನು ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅವುಗಳನ್ನು ಪ್ರವಾಸಿಗರು ಬಳಸುವ ದೊಡ್ಡ ದೊಡ್ಡ ಟ್ರಾಲಿ ಬ್ಯಾಗ್ಗಳಲ್ಲಿ ತುಂಬುತ್ತಿದ್ದರು. ನಂತರ ಸಾಮಾನ್ಯ ಪ್ರಯಾಣಿಕರಂತೆ ಬಸ್ ಏರಿ ಬೆಂಗಳೂರಿಗೆ ಬರುತ್ತಿದ್ದರು. ಬ್ಯಾಗ್ ನೋಡಿದರೆ ಯಾರಿಗೂ ಅನುಮಾನ ಬಾರದಂತೆ ಪ್ಲ್ಯಾನ್ ಮಾಡಿದ್ದರು.
*ಬೆಂಗಳೂರಿನಲ್ಲಿ ಮಾರಾಟಕ್ಕೆ ಸಂಚು:*
ಕೇರಳದಿಂದ ಸಾಗಿಸಿ ತಂದಿದ್ದ ಈ ಶ್ರೀಗಂಧವನ್ನು ಬೆಂಗಳೂರಿನಲ್ಲಿ ತಮ್ಮ ಕಾಯಂ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು. ಆದರೆ, ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತಂಡ ರಚಿಸಿ ದಾಳಿ ನಡೆಸಿದ್ದಾರೆ. ಗ್ರಾಹಕರಿಗೆ ಮಾಲು ತಲುಪಿಸುವ ಮುನ್ನವೇ ನಾಲ್ವರು ಕಿಲಾಡಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
*20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ಜಪ್ತಿ:*
ಬಂಧಿತರಿಂದ ಒಟ್ಟು 82 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 20.9 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಎರೆಡು ಕಾರುಗಳು ಮತ್ತು 5 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.












