ಇತ್ತೀಚಿನ ಸುದ್ದಿ
Hassan | ಅರಸೀಕೆರೆ: ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವ- ಅಳಿಯ ಇಬ್ಬರೂ ನೀರುಪಾಲು
20/04/2026, 14:12
ಹಾಸನ(reporterkarnataka.com): ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಮನಕಲುಕುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 12 ವರ್ಷದ ಬಾಲಕ ಪ್ರತೀಕ್ ಹಾಗೂ ಬಾಲಕನ ಮಾವ 45 ವರ್ಷದ ಪ್ರಭಾಕರ್ ಎಂದು ಗುರುತಿಸಲಾಗಿದೆ. ಆಗಿದ್ದೇನು?
ಬಾಲಕ ಪ್ರತೀಕ್ ಬೇಸಿಗೆ ರಜೆಯ ಹಿನ್ನೆಲೆ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವನ ಜೊತೆಗೆ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತೀಕ್ ಆಯತಪ್ಪಿ ಕೆರೆಗೆ ಬಿದ್ದಿದ್ದಾನೆ. ಕಾಲು ಜಾರಿ ಕೆರೆಗೆ ಬಿದ್ದ ಪ್ರತೀಕ್ನನ್ನು ರಕ್ಷಿಸಲು ಮಾವ ಪ್ರಭಾಕರ್ ಕೆರೆಗೆ ಹಾರಿದ್ದು,

ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರತೀಕ್ ಪ್ರಭಾಕರ್ ಅವರ ಸೋದರಿಯ ಮಗನಾಗಿದ್ದು, ಬೇಸಿಗೆ ರಜೆ ಹಿನ್ನೆಲೆ ಸೋದರ ಮಾವನ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಾವ ಅಳಿಯ ಇಬ್ಬರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.













