ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ ಮತದ ಮೇಲೆ ಎಚ್ಡಿಕೆ ಕಣ್ಣು!
17/06/2026, 19:43
ಬೆಂಗಳೂರು(reporterkarnataka.com):ನಾಳೆ ನಡೆಯಲಿರುವ ಮಹತ್ವದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’ದ ಸದ್ದು ಜೋರಾಗಿದೆ. ಕ್ರಾಸ್ ವೋಟಿಂಗ್ ಭೀತಿ ಹಾಗೂ ಆಂತರಿಕ ಭಿನ್ನಮತ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಜೆಡಿಎಸ್(JDS) ತನ್ನ ಪಕ್ಷದ ಎಲ್ಲಾ 16 ಶಾಸಕರನ್ನು ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್ಗೆ ಶಿಫ್ಟ್ ಮಾಡಿದೆ. ಇಂದು ರಾತ್ರಿ ರೆಸಾರ್ಟ್ನಲ್ಲೇ ಶಾಸಕರ ವಾಸ್ತವ್ಯ ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಜೆಡಿಎಸ್ನ 16 ಶಾಸಕರು ಈಗಾಗಲೇ ದೇವನಹಳ್ಳಿಯ ರೆಸಾರ್ಟ್ ತಲುಪಿದ್ದು, ಅಲ್ಲಿಯೇ ಬಿಡುಬಿಟ್ಟಿದ್ದಾರೆ. ಇಂದು ಇಡೀ ರಾತ್ರಿ ಶಾಸಕರು ರೆಸಾರ್ಟ್ನಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಗ್ಗೆ ಪರೀಕ್ಷೆಯ ದಿನದಂತೆ ಒಟ್ಟಾಗಿಯೇ ವಿಧಾನಸೌಧಕ್ಕೆ ಮತದಾನ ಮಾಡಲು ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
*ಜನಾರ್ದನ ರೆಡ್ಡಿ ಮತ ಸೆಳೆಯಲು ಜೆಡಿಎಸ್ ಮಾಸ್ಟರ್ ಪ್ಲಾನ್!:*
ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಅತ್ಯಂತ ನಿರ್ಣಾಯಕವಾಗಿದ್ದು, ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ಮತವನ್ನು ತಮ್ಮ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಸೆಳೆಯಲು ಜೆಡಿಎಸ್ ಭರ್ಜರಿ ತಂತ್ರ ರೂಪಿಸಿದೆ. ಜನಾರ್ದನ ರೆಡ್ಡಿ ಅವರ ಬೆಂಬಲವನ್ನು ಸಂಪೂರ್ಣವಾಗಿ ಕ್ರೋಢೀಕರಿಸಲು ಜೆಡಿಎಸ್ನ ಉನ್ನತ ನಾಯಕರು ಈಗಾಗಲೇ ತೆರೆಮರೆಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.













