ಇತ್ತೀಚಿನ ಸುದ್ದಿ
ಪೆಟ್ರೋಲ್ ಗೆ ಎಥೆನಾಲ್ (E20) ಮಿಶ್ರಣ | ಪ್ರಧಾನಿ ಭೇಟಿಗೆ ಬಂದ ಮಾಜಿ ಸಿಎಂ ಕೇಜ್ರಿವಾಲ್ಗೆ ದೆಹಲಿ ಪೊಲೀಸರ ತಡೆ
04/08/2026, 20:08
ನವದೆಹಲಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸುಮಾರು 100 ಜನರೊಂದಿಗೆ ಮೆರವಣಿಗೆ ಹೊರಟಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಂಗಳವಾರ ದೆಹಲಿ ಪೊಲೀಸರು ತಡೆದರು.
ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತನಾಡಿದ ಅವರ, ನಾವು ಭಯೋತ್ಪಾದಕರಲ್ಲ. ಪೆಟ್ರೋಲ್ ಗೆ ಎಥೆನಾಲ್ (E20) ಮಿಶ್ರಣದಿಂದ ಉಂಟಾಗುವ ಸಮಸ್ಯೆಗೆ ಸಂಬಂಧಿಸಿದಂತೆ ಅವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ಅವರಿಗೆ ತಿಳಿಸಿ ಎಂದು ಹೇಳಿದರು.
ಎಥೆನಾಲ್ ಮಿಶ್ರಣದ ಪೆಟ್ರೋಲ್ ವಿರುದ್ಧ ಲಕ್ಷಾಂತರ ಅರ್ಜಿಗಳನ್ನು ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೋರಿ ಕಳುಹಿಸಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಅರ್ಜಿಗಳನ್ನು ವೈಯಕ್ತಿಕವಾಗಿ ಅವರಿಗೆ ಹಸ್ತಾಂತರಿಸಲು ಬಂದಿರುವುದಾಗಿ ಹೇಳಿದ ಅರವಿಂದ್ ಕೇಜ್ರಿವಾಲ್, ಇ 20 ಇಂಧನ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬಯಸುತ್ತೇವೆ. ದಯವಿಟ್ಟು ಅವರಿಗೆ ತಿಳಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.
ಆಪ್ ದೆಹಲಿ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ಕೇಜ್ರಿವಾಲ್ ಅವರು ಲಕ್ಷಾಂತರ ಅರ್ಜಿಗಳೊಂದಿಗೆ ಬಂದಿದ್ದಾರೆ. ಅವರು ಪ್ರಧಾನಿಯವರೊಂದಿಗೆ ಎಥೆನಾಲ್ ಕುರಿತು ಚರ್ಚೆ ಮಾಡಲು ಬಯಸುತ್ತಾರೆ. ಈ ಬಗ್ಗೆ ನಾವು ಪತ್ರಿಕಾಗೋಷ್ಠಿಗಳಲ್ಲಿ ಪ್ರಧಾನಿಗೆ ಪದೇ ಪದೇ ಹೇಳಿದ್ದೇವೆ ಎಂದರು. ಪ್ರಧಾನಿ ನಿವಾಸದ ಬಳಿ ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ಪ್ರತಿಭಟನೆ ನಡೆಸಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಕೆಲವು ಗಂಟೆಗಳ ಕಾಲ ಬಂಧಿಸಿದ್ದರು.












