12:12 PM Wednesday27 - May 2026
ಬ್ರೇಕಿಂಗ್ ನ್ಯೂಸ್
ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ?

ಇತ್ತೀಚಿನ ಸುದ್ದಿ

ದ.ಕ. ಲೋಕಸಭೆ ಕ್ಷೇತ್ರ: ಬಿಜೆಪಿ- ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್; ಗೆಲುವು ಯಾರದೇ ಇರಲಿ, ಗೆಲುವಿನ ಅಂತರ ಮಾತ್ರ ತಗ್ಗಲಿದೆ!

24/04/2024, 18:03

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯದ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಸ ಮುಖಗಳನ್ನು ಕಣಕ್ಕಿಳಿಸಿದ್ದು, ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹೆಚ್ಚಿನವರ ಬಾಯಿಯಲ್ಲಿ ಕೇಳಿ ಬರುತ್ತಿರುವುದು ಒಂದೇ ಮಾತು. ಅದೇನೆಂದರೆ, ‘ಈ ಹಿಂದೆ ನಡೆದ ಚುನಾವಣೆಗಳಂತಲ್ಲ ಈ ಬಾರಿಯ ಸ್ಪರ್ಧೆ’ ಎನ್ನುವುದು. ಯಾಕೆಂದರೆ ಈ ಹಿಂದೆ ನಡೆದ ಸುಮಾರು 6 ಚುನಾವಣೆಗಳಲ್ಲಿ ಇಲ್ಲಿ ಬಿಜೆಪಿಗೆ ನಿರಾಯಸದ ಗೆಲುವಿನ ವಾತಾವರಣ ಇತ್ತು.
ಆದರೆ, ಈ ಬಾರಿ ಚಿತ್ರಣ ಪೂರ್ತಿ ಬದಲಾಗಿದೆ. ಕಾರಣ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ವ್ಯಕ್ತಿತ್ವ ಹಾಗೂ ಸೈದಾಂತಿಕವಾಗಿ ಅವರಲ್ಲಿರುವ ಗಟ್ಟಿತನ ಮತ್ತು ಪಕ್ಷದೊಳಗೆ ಅಭ್ಯರ್ಥಿ ಕುರಿತು ಕೇಳಿ ಬಾರದ ಅಪಸ್ವರ.
ಕಳೆದ 6 ಲೋಕಸಭೆ ಚುನಾವಣೆಯನ್ನು ಅವಲೋಕಿಸಿದರೆ, ಈ ಬಾರಿ ದಕ್ಷಿಣ ಕನ್ನಡದ ಕಾಂಗ್ರೆಸಿಗರು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಹಿಂದಿನ ಚುನಾವಣೆಯಂತೆ ಯಾವುದೇ ಬಣ ರಾಜಕೀಯ ಸಕ್ರಿಯವಾಗಿಲ್ಲ. ಯಾವುದೇ ಗುಂಪುಗಾರಿಕೆ ಕಾಣುತ್ತಿಲ್ಲ. ಯಾವುದೇ ಅಪಸ್ವರ ಕೇಳಿಸುತ್ತಿಲ್ಲ. ಪದ್ಮರಾಜ್ ಅವರ ಕೊಡೆಯಡಿ ಎಲ್ಲ ನಾಯಕರು ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ ಅವರ ನಾಯಕತ್ವದಡಿಯಲ್ಲಿ ಜಿಲ್ಲೆಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು, ಮುಖಂಡರು, ಮರಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆರಂಭದಲ್ಲಿ ಕೆಲವು ನಾಯಕರು, ಮುಖಂಡರು ಮುಖ ತೋರಿಸಿ ಕಣ್ಮರೆಯಾದರೂ ಮತ್ತೆ ಪ್ರಚಾರ ಕಾರ್ಯದಲ್ಲಿ ಸೇರಿಕೊಂಡಿದ್ದಾರೆ.
ಕಳೆದ 3 ದಶಕಗಳಿಂದ ಬಿಜೆಪಿ ಕೈಗೊಪ್ಪಿಸಿದ ದ.ಕ. ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೈ ಪಾಳಯಕ್ಕೆ ಇದು ಬಹಳ ಮಹತ್ವದ ಚುನಾವಣೆಯಾಗಿದೆ. ವಿ. ಧನಂಜಯ ಕುಮಾರ್, ಡಿ.ವಿ. ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಕಳೆದ 33 ವರ್ಷಗಳಿಂದ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ನ ಪದ್ಮರಾಜ್ ಅವರ ಹಾಗೆ ನಿವೃತ್ತ ಸೇನಾಧಿಕಾರಿಯಾದ ಕ್ಯಾ.
ಚೌಟ ಅವರು ಕೂಡ ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಹಾಗಾಗಿ ಉಭಯ ಪಕ್ಷಗಳಿಗೆ ಪರಸ್ಪರ ಅಭ್ಯರ್ಥಿಯನ್ನು ನಿಂದಿಸುವ ಅವಕಾಶ ತಪ್ಪಿ ಹೋಗಿದೆ.
ಕಾಂಗ್ರೆಸಿಗೆ ಈ ಬಾರಿಯ ಚುನಾವಣೆಯ ಪ್ಲಸ್ ಎಂದರೆ ಜಿಲ್ಲೆಯ ಕೈ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಜತೆಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಹರಿದು ಹಂಚಿಕೊಳ್ಳುವಂತಹ ಯಾವುದೇ ಅಭ್ಯರ್ಥಿ ಕಣದಲ್ಲಿಲ್ಲ. ಇದು ಕೈ ಪಾಳಯಕ್ಕೆ ವರದಾನವಾಗಿದೆ.
ಇನ್ನೊಂದು ಕಡೆಯಲ್ಲಿ ಬಿಜೆಪಿಯ ಪ್ಲಸ್ ಪಾಯಿಂಟ್ ಎಂದರೆ ಕೇಸರಿ ಪಾಳಯದ ಸಾಂಪ್ರದಾಯಿಕ ಮತಗಳು ಏನೇ ಆದರೂ ಅದು ಬೇರೆ ಕಡೆ ತಿರುಗುವುದಿಲ್ಲ. ಬಿಜೆಪಿ ಹೇಳುವ ಹಿಂದುತ್ವದ ಬಹು ದೊಡ್ಡ ಅನುಯಾಯಿಗಳು ಕರಾವಳಿಯಲ್ಲಿದ್ದಾರೆ. ಕಾಂಗ್ರೆಸ್ ನ ಒಗ್ಗಟ್ಟಿನ ಮಂತ್ರ, ಮತ ವಿಭಜಿಸುವ ಸ್ಪರ್ಧಿಗಳು ಇಲ್ಲದಿರುವುದು, ಇವೆಲ್ಲದರ ಜತೆ ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ. ಇವೆಲ್ಲದರೊಂದಿಗೆ ಕುದ್ರೋಳಿ ದೇಗುಲದಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ವೈಯಕ್ತಿಕ ಚರಿಷ್ಮಾ ಕೂಡ ಕೆಲಸ ಮಾಡಲಿದೆ. ಇವೆಲ್ಲದ ಪರಿಣಾಮ ದ.ಕ. ಅಖಾಡದಲ್ಲಿ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ಹಾಗಾಗಿ ಗೆಲವು ಯಾರದೇ ಇರಲಿ, ಗೆಲುವಿನ ಅಂತರ ಮಾತ್ರ ಇಳಿಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು