ಇತ್ತೀಚಿನ ಸುದ್ದಿ
ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆ
22/04/2026, 18:56
ಚಾಮರಾಜನಗರ(reporterkarnataka.com): ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹಳೆಯ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಸ್ಥಳೀಯವಾಗಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಗೆ ಬರುವ ಬೂದಗಟ್ಟಿ ದೊಡ್ಡಿ ಎಂಬಲ್ಲಿನ ಅರಣ್ಯ ಭಾಗದಲ್ಲಿ ಈ ಘಟನೆ ನಡೆದಿದೆ.ಅರಣ್ಯ ವೀಕ್ಷಕರು (ಫಾರೆಸ್ಟ್ ವಾಚರ್ಸ್) ಎಂದಿನಂತೆ ತಮ್ಮ ದೈನಂದಿನ ಗಸ್ತು ಕಾರ್ಯಕ್ಕೆ ತೆರಳಿದ್ದಾಗ, ದುರ್ಗಮ ಕಾಡಿನ ನಡುವೆ ಕಾವೇರಿ ನದಿ ತೀರದ ಪಕ್ಕದಲ್ಲಿ ಈ ಅಸ್ಥಿಪಂಜರ ಕಂಡುಬಂದಿದೆ. ಈ ಪ್ರದೇಶವು ಅತ್ಯಂತ ದಟ್ಟವಾದ ಅರಣ್ಯದಿಂದ ಕೂಡಿದ್ದು, ಇಲ್ಲಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಇಂತಹ ನಿರ್ಬಂಧಿತ ಪ್ರದೇಶದಲ್ಲಿ ಮಾನವನ ಅಸ್ಥಿಪಂಜರ ಸಿಕ್ಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಎಫ್.ಎಸ್.ಎಲ್ (ಸೊಕೊ) ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಸ್ಥಿಪಂಜರವು ಯಾರದ್ದು ಮತ್ತು ಈ ವ್ಯಕ್ತಿ ಕಾಡಿನ ಒಳಗೆ ಹೇಗೆ ಬಂದರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಸ್ಥಿಪಂಜರದ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.












