11:32 AM Wednesday6 - May 2026
ಬ್ರೇಕಿಂಗ್ ನ್ಯೂಸ್
ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ… ಮಗ ಸಿಎಂ ಆಗೋ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜಯ್‌ ತಂದೆ-ತಾಯಿ ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ

ಇತ್ತೀಚಿನ ಸುದ್ದಿ

ಅಡಿಕೆ ಮಾರುಕಟ್ಟೆಯಲ್ಲಿ ಏರುಪೇರು: ಧಾರಣೆಯಲ್ಲಿ ಏರಿಳಿತ; ತಿಂಗಳಲ್ಲಿ 40 ರೂ. ಇಳಿಕೆ

10/06/2022, 16:57

ಸುಳ್ಯ(reporterkarnataka.com): ಸುಮಾರು 2 ವರ್ಷಗಳಿಂದ ಉತ್ತಮ ಧಾರಣೆ ಹೊಂದಿದ್ದ ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ತಿಂಗಳ ಅವಧಿಯಲ್ಲಿ ಅಡಿಕೆ ಬೆಲೆಯಲ್ಲಿ ಸುಮಾರು 40 ರೂ. ಇಳಿಕೆ ಕಂಡಿದೆ.

ಇಷ್ಟು ಸಮಯ ಉತ್ತಮ ಧಾರಣೆ ಇದ್ದು ಈಗ ಅಡಿಕೆ ಒಣಗಿಸಿ, ಸುಲಿದು ಮಾರಾಟ ಮಾಡುವ ಸಂದರ್ಭದಲ್ಲಿ ಧಾರಣೆ ಕುಸಿತ ಆಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿ ನಷ್ಟ ಅನುಭವಿಸುವಂತಾಗಿದೆ ಎಂಬುದು ಕೃಷಿಕರ ನೋವು. ಹೊಸ ಅಡಿಕೆಯ ದರ ಸುಳ್ಯದಲ್ಲಿ ಕೆಜಿಗೆ 400 ರೂ.ಆಸುಪಾಸಿನಲ್ಲಿದೆ. ಕಳೆದ ತಿಂಗಳು 435-440 ರೂ. ವರೆಗೆ ಇದ್ದ ಅಡಿಕೆ ದರ ರೂ.ಈಗ 400-410ಕ್ಕೆ ಇಳಿದಿದೆ. ತಿಂಗಳಲ್ಲಿ ಹೆಚ್ಚು ಕಮ್ಮಿ 40 ರೂಗಳಷ್ಟು ಇಳಿಕೆ ಕಂಡಿದೆ. ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಜೂ.9ರಂದು ಹೊಸ ಅಡಿಕೆಗೆ ಕೆಜಿಗೆ ರೂ.400 ರಿಂದ 415ರ ವರೆಗೆ ಇತ್ತು. ಹಳೆಯ ಅಡಿಕೆಗೆ ಕೆಜಿಗೆ 540 ರೂ ಇತ್ತು. ಸುಳ್ಯ ನಗರದ ಇತರ ವ್ಯಾಪಾರಸ್ಥರಲ್ಲಿ 400 ರಿಂದ 410ರವರೆಗೆ ದರ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಡಿಕೆಯ ಗುಣಮಟ್ಟ ಅನುಸರಿಸಿ ಮತ್ತಷ್ಟು ಏರುಪೇರು ಸಂಭವಿಸುತ್ತದೆ. ಹೊಸ ಅಡಿಕೆ‌ ಮಾತ್ರ ಈಗ ಮಾರುಕಟ್ಟೆಗೆ ಬರುತ್ತದೆ. ಹಳೆ ಅಡಿಕೆ ಅಸ್ಟಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಈ ವರ್ಷ ಒಣಗಿಸಿ ಸುಲಿದ ಅಡಿಕೆ‌ ಸಾಮಾನ್ಯವಾಗಿ ಈ ಅವಧಿಯಲ್ಲಿ ಮಾರುಕಟ್ಟೆಗೆ ಬರುತಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಅಡಿಕೆ ಧಾರಣೆಯ ಏರಳಿತದಿಂದಾಗಿ ಅಡಿಕೆ ಈಗ ಮಾರಾಟ ಮಾಡಬೇಕೋ ಸ್ವಲ್ಪ ದಿನ ಕಾಯಬೇಕೋ ಎಂಬ ಗೊಂದಲ ಕೃಷಿಕರಲ್ಲಿದೆ. ಖಾಸಗೀ ವ್ಯಾಪಾರಿಗಳು ಕೂಡ ಹೆಚ್ಚು ಅಡಿಕೆ ಖರೀದಿಸಿ ಶೇಖರಿಸುವುದರಲ್ಲಿ ಆಸಕ್ತರಾಗಿಲ್ಲ ಎಂಬುದು ಮಾರುಕಟ್ಟೆಯ 

ವರದಿ. ಆದರೆ ಎಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಮಳೆ ಸುರಿದ ಕಾರಣ ಅಡಿಕೆ ಒದ್ದೆಯಾಗಿದ್ದು ಅದನ್ನು ಒಣಗಿಸಿ ಶೇಖರಿಸಿ ಇಡುವುದು ಕಷ್ಟ. ಆದುದರಿಂದ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಕೃಷಿಕರು. ಶ್ರೀಲಂಕಾ, ಮ್ಯಾನ್ಮಾರ್, ಬರ್ಮ ಮತ್ತಿತರ ದೇಶಗಳಿಂದ ಅಡಿಕೆ ಆಮದಾಗುತ್ತಿರುವ ಕಾರಣ ಅಡಿಕೆ ದರ ಕುಸಿಯಲು ಕಾರಣ ಎಂದು ಹೇಳಲಾಗುತಿದೆ.

ಅಡಿಕೆ ಮಾರುಕಟ್ಟೆಗೆ ಬರುವುದು ಈಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಾರೆ ಸುಳ್ಯ ನಗರದ ಪ್ರಮುಖ ಅಡಿಕೆ ವ್ಯಾಪಾರಸ್ಥರಾದ ಆದಂ ಕುಂಞಿ ಕಮ್ಮಾಡಿಯವರು. ಉತ್ತರ ಭಾರತದ ರಾಜ್ಯಗಳಿಂದ ಅಡಿಕೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಅಡಿಕೆ ಖರೀದಿಸಿದರೂ ಅಸ್ಟಾಗಿ ಹೋಗುವುದಿಲ್ಲ ಎನ್ನುತ್ತಾರವರು. ವಿದೇಶದಿಂದ ಅಡಿಕೆ ಆಮದಾಗುವ ಕಾರಣ ನಮ್ಮ ಅಡಿಕೆಗೆ ಬೇಡಿಕೆ ಕಡಿಮೆಯಾಗಿ ದರ ಕುಸಿಯಲು ಕಾರಣವಾಗುತಿದೆ. ಆದುದರಿಂದ ಈ ಭಾಗದ ಸಚಿವರುಗಳು, ಸಂಸದರುಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಆಮದು ಸುಂಕ ಹೆಚ್ಚಿಸುವುದು ಮತ್ತಿತರ ಕ್ರಮ ಕೈಗೊಂಡು ವಿದೇಶದಿಂದ ಅಡಿಕೆ‌ ಬರುವುದಕ್ಕೆ ಕಡಿವಾಣ ಹಾಕಿದರೆ ಅಡಿಕೆಯ ಬೇಡಿಕೆ ಹೆಚ್ಚಿ ದರ ಏರಬಹುದು ಎನ್ನುತ್ತಾರೆ ಎಪಿಎಂಸಿಯ ಮಾಜಿ ನಿರ್ದೇಶಕರೂ ಆದ ಆದಂ‌ ಕುಂಞಿ ಕಮ್ಮಾಡಿಯವರು.

ಕ್ಯಾಂಪ್ಕೋಗೆ ಅಡಿಕೆ ಬರುವುದರಲ್ಲಿ ಅಸ್ಟೇನು ಕಡಿಮೆಯಾಗಿಲ್ಲ, ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ಶಾಖೆ‌ ಮತ್ತು ವಿವಿಧ ಉಪ ಶಾಖೆಗಳ ಮೂಲಕ ಪ್ರತಿ ದಿನ ಸರಾಸರಿ 100 ಕ್ವಿಂಟಲ್ ಅಡಿಕೆ ಖರೀದಿಸಲಾಗುತ್ತದೆ ಎನ್ನುತ್ತಾರೆ ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ವ್ಯವಸ್ಥಾಪಕರಾದ ಪ್ರದೀಪ್. ಕ್ಯಾಂಪ್ಕೋ ಉತ್ತಮ ಬೆಲೆ ನೀಡಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಎಲ್ಲಾ ಪ್ರಯತ್ನ ನಡೆಸುತಿದೆ.ಇದೀಗ ಒಂದೆರಡು ದಿನಗಳಿಂದ ಮತ್ತೆ ನಿಧಾನಕ್ಕೆ ಮಾರುಕಟ್ಟೆ ಸ್ಥಿರವಾಗುತ್ತಿದ್ದು ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ.ಕೆಲವು ದಿನಗಳಲ್ಲಿ ಮತ್ತೆ ದರ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಇತ್ತೀಚಿನ ಸುದ್ದಿ

ಜಾಹೀರಾತು