ಇತ್ತೀಚಿನ ಸುದ್ದಿ
ಬಿಎಸ್ಸೆನ್ನೆಲ್ ಟವರ್ ಸ್ಥಾಪನೆ, ನೌಕರರ ವೇತನ ಪರಿಷ್ಕರಣೆ: ಲೋಕಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ
03/12/2025, 20:45
ನವದೆಹಲಿ(reporterkarnatata.com); ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಾಲೇಶಪುರ ಗ್ರಾಮದಲ್ಲಿ ಬಿಎಸ್ ಎನ್ಎಲ್ ಮೊಬೈಲ್ ಟವರ್ ಸ್ಥಾಪನೆಯ ಕುರಿತು ಬುಧವಾರ ನಡೆದ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರದ ಗಮನ ಸೆಳೆದರು.

ಅಧಿವೇಶನದಲ್ಲಿ ಮಾತನಾಡಿದ ಅವರು ಡಿಜಿಟಲ್ ಇಂಡಿಯಾ ಮಿಷನ್ನ ಮೂಲಭೂತ ಉದ್ದೇಶಗಳಲ್ಲಿ ಪ್ರಮುಖವಾದುದು ಡಿಜಿಟಲ್ ಅಂತರವನ್ನು ನಿವಾರಿಸುವುದು ಮತ್ತು ಅಂತಿಮ ಹಂತದ ಸಂಪರ್ಕವನ್ನು ಖಚಿತಪಡಿಸುವುದಾಗಿದೆ ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲ್ಲೂಕಿನ ಹಾಲೇಶಪುರ, ಅರಳಿಕಟ್ಟೆ, ಚಿಕ್ಕಕೋಗಲೂರು ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಮುಸ್ಸೇನಹಾಳು ಗ್ರಾಮ ಹಾಗೂ ಹರಪನಹಳ್ಳಿ ತಾಲ್ಲೂಕಿನ ಕೋಂಗನಹೊಸೂರು ಮತ್ತು ಒಳತಾಂಡ ಗ್ರಾಮಗಳ ಜನತೆ ಇಂದು ಕೂಡ ಮೂಲಭೂತ ಮೊಬೈಲ್ ನೆಟ್ವರ್ಕ್ ಸೌಲಭ್ಯವಿಲ್ಲದೆ ದೈನಂದಿನ ತೊಂದರೆ ಅನುಭವಿಸುತ್ತಿದ್ದಾರೆಂದರು.
ಈ ವಿಷಯವನ್ನು ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ.ಈ ವಿಷಯದ ಬಗ್ಗೆ ಈಗಾಗಲೇ ಶಿವಮೊಗ್ಗ ವಲಯ ಕಚೇರಿಗೆ ನಾಲ್ಕು ಪತ್ರಗಳು, ಬಳ್ಳಾರಿ ವಲಯ ಕಚೇರಿಗೆ ಎರಡು ಪತ್ರಗಳು, ಹಾಗು ಸಂವಹನ ಸಚಿವಾಲಯಕ್ಕೆ 16/03/2025 ಮತ್ತು 20/09/2025 ರಂದು ಪತ್ರಗಳು ಕಳುಹಿಸಲಾಗಿದೆ. ಸಂವಹನ ಸಚಿವಾಲಯದಿಂದ 17/10/2025 ರಂದು ಉತ್ತರ ಬಂದಿದ್ದರೂ ಬಿಎಸ್ ಎನ್ಎಲ್ ಮೊಬೈಲ್ ಟವರ್ ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ.
ಈ ಪರಿಣಾಮವಾಗಿ ಇಲ್ಲಿ ವಾಸಿಸುವ ವಿದ್ಯಾರ್ಥಿಗಳು, ರೈತರು, ಸಣ್ಣ ವ್ಯಾಪಾರಿಗಳು
ಇವರೆಲ್ಲರಿಗೂ ಡಿಜಿಟಲ್ ಪೇಮೆಂಟ್, ಆನ್ಲೈನ್ ಶಿಕ್ಷಣ, ಟೆಲಿಮೆಡಿಸಿನ್, ತುರ್ತು ಸಂಪರ್ಕ ಸೇರಿದಂತೆ ಅನೇಕ ಸೇವೆಗಳಿಗೆ ಸಾಕಷ್ಟು ಅಡಚಣೆಯಾಗುತ್ತಿದೆ.ಈ ರೀತಿಯ ದೀರ್ಘಕಾಲದ ಸಂಪರ್ಕ ಕೊರತೆಯು ಗ್ರಾಮೀಣ-ನಗರ ಡಿಜಿಟಲ್ ಅಂತರವನ್ನು ಹೆಚ್ಚಿಸುತ್ತಿದ್ದು, ಮೂಲಭೂತ ಸೇವೆಗಳು ತೊಂದರೆಯನ್ನು ಎದುರಿಸುತ್ತಿವೆ.
ಆದ್ದರಿಂದ,ಉಲ್ಲೇಖಿತ ಗ್ರಾಮಗಳಲ್ಲಿ ತಕ್ಷಣ ಬಿಎಸ್ ಎನ್ಎಲ್ ಮೊಬೈಲ್ ಟವರ್ ಸ್ಥಾಪಿಸುವಂತೆ ಸಂವಹನ ಸಚಿವರವರು ಬಿಎಸ್ ಎನ್ಎಲ್ ಸಂಸ್ಥೆಗೆ ತಕ್ಷಣ ನಿರ್ದೇಶನ ನೀಡುವಂತೆ ವಿನಂತಿಸಿದರು. ಇದರಿಂದ ನಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ಸಮಾನ ಮತ್ತು ನಂಬಿಕೆಗೆ ಅರ್ಹವಾದ ಡಿಜಿಟಲ್ ಸಂಪರ್ಕ ದೊರೆಯುತ್ತದೆ ಎಂದು ಮನವಿ ಮಾಡಿದರು.
2017ರಿಂದ ಬಾಕಿ ಉಳಿದಿರುವ ಬಿಎಸ್ ಎನ್ ಎಲ್ ನೌಕರರ 3ನೇ ವೇತನ ಪರಿಷ್ಕರಣೆ ನೀಡುವುದರಲ್ಲಿ “ಅಫೋರ್ಡಬಿಲಿಟಿ ಕ್ಲಾಸ್” ಎಂಬ ಷರತ್ತು ವಿಧಿಸಲಾಗಿದೆ.
ಈ ಷರತ್ತು ಅನ್ಯಾಯಕರವಾಗಿದೆ, ಏಕೆಂದರೆ ಬಿಎಸ್ ಎನ್ ಎಲ್ ಸಂಸ್ಥೆ ಲಾಭಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಇದು ರಾಷ್ಟ್ರ ಸೇವೆಗೆ ಮೀಸಲಾಗಿರುವ ಸಾರ್ವಜನಿಕ ವಲಯದ ಸಂಸ್ಥೆ.ಆದ್ದರಿಂದ,ನ್ಯಾಯದ ದೃಷ್ಟಿಯಿಂದ ಈ ಅಫೋರ್ಡಬಿಲಿಟಿ ಷರತ್ತನ್ನು ರದ್ದುಪಡಿಸಿ, 3ನೇ ವೇತನ ಪರಿಷ್ಕರಣೆಯನ್ನು 31 ಮಾರ್ಚ್ 2026ರ ಒಳಗಾಗಿ ಬಿಎಸ್ ಎನ್ ಎಲ್ ನೌಕರರಿಗೆ ಅನುಗ್ರಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.













