ಇತ್ತೀಚಿನ ಸುದ್ದಿ
ದಾವಣಗೆರೆ: ಕೆಒಎಫ್ ಗೋದಾಮು ಕಟ್ಟಡ ಉದ್ಘಾಟನೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ
27/11/2025, 18:59
ದಾವಣಗೆರೆ(reporterkarnataka.com): ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ (ಕೆಒಎಫ್) ವತಿಯಿಂದ ಕೇಂದ್ರ ಸರ್ಕಾರದ ಅನುದಾನದಡಿ ದಾವಣಗೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಗೋದಾಮು ಕಟ್ಟಡ ಹಾಗೂ ಸಾರ್ಟೆಕ್ಸ್ ಯಂತ್ರದ ಉದ್ಘಾಟನೆಯನ್ನು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತವು ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯ ಕಲ್ಪನೆಯಂತೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ 26 ಅಕ್ಟೋಬರ್ 1984ರಂದು ನೋಂದಾಯಿಸಲ್ಪಟ್ಟಿದ್ದು, ಕಳೆದ ನಾಲ್ಕು ದಶಕಗಳಿಂದ ರೈತರ ಹಿತಕಾಂಕ್ಷೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಂಸ್ಥೆಯು ಕಳೆದ 40 ವರ್ಷಗಳಿಂದ ‘ಸಫಲ್’ ಬ್ರಾಂಡ್ ಹೆಸರಿನಲ್ಲಿ ಉನ್ನತ ಗುಣಮಟ್ಟದ ವಿವಿಧ ಖಾದ್ಯ ತೈಲಗಳು ಹಾಗೂ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಕೃಷಿ ಉತ್ಪನ್ನಗಳ ಮಾರಾಟದಲ್ಲಿಯೂ ಯಶಸ್ವಿಯಾಗಿದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಂಸ್ಥೆಯು ಸ್ವಂತ ಮಾರಾಟ ಮಳಿಗೆಗಳನ್ನು ತೆರೆದು, ‘ಸಫಲ್’ ಬ್ರಾಂಡ್ ಖಾದ್ಯ ತೈಲಗಳು ಹಾಗೂ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಿದೆ ಎಂದರು.
ಕೆಓಎಫ್ ಸಂಸ್ಥೆಯು ನಂಬಿಕೆಗೆ ಅರ್ಹವಾಗಿದ್ದು, ಕಲಬೆರಕೆ ರಹಿತ ಉತ್ಪನ್ನಗಳನ್ನು ಪೂರೈಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಗುಣಮಟ್ಟದ ಸಂಸ್ಕರಣೆ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ಕಟ್ಟುನಿಟ್ಟಿನ ಸ್ವಚ್ಛತಾ ಮಾನದಂಡಗಳನ್ನು ಪಾಲಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ.
ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದ್ದು, ರೈತ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಹಕರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕೆಒಎಫ್ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡರ್,ಉಪಾಧ್ಯಕ್ಷರಾದ ಎಸ್ ಸುಗನಗೌಡ,ಕೆಇಎಫ್ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸಿ ರೆಡ್ಡಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.













