ಇತ್ತೀಚಿನ ಸುದ್ದಿ
Mangaluru | ಕ್ರೈಸ್ತರಿಂದ ಚರ್ಚ್ ಮತ್ತು ಸಿಮೆಟರಿ ಗಳಲ್ಲಿ ವಿಶೇಷ ಪ್ರಾರ್ಥನೆ
02/11/2025, 20:05
ಮಂಗಳೂರು(reporterkarnataka.com): ಕ್ರೈಸ್ತರು ನವೆಂಬರ್ 2ರಂದು ತಮ್ಮ ಕುಟುಂಬಗಳ ಮೃತ ಸದಸ್ಯರನ್ನು ಸ್ಮರಿಸಿ ಅವರ ಆತ್ಮಗಳಿಗೆ ಸದ್ಗತಿ ಲಭಿಸಲು ದೇವರ ಕರುಣೆ ಮತ್ತು ಅನುಗ್ರಹ ಕೋರಿ ಚರ್ಚ್ ಹಾಗೂ ಸಿಮೆಟರಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರಿನ ಕುಲಶೇಖರ, ಪಾಲ್ದನೆ ಮತ್ತು ಶಕ್ತಿನಗರ ಚರ್ಚ್ ಗಳಿಗೆ ಕುಲಶೇಖರ ಚರ್ಚ್ ಸಿಮೆಟರಿಯೇ ಅಧಿಕೃತ ಸಿಮೆಟರಿ ಆಗಿದ್ದು,ಇಂದು ಈ ಮೂರು ಚರ್ಚ್ ಗಳ ಕ್ರೈಸ್ತರು ಕುಲಶೇಖರ ಚರ್ಚ್ ಗೆ ತೆರಳಿ ಅಲ್ಲಿನ ಸಿಮೆಟರಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.

ಕುಲಶೇಖರ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಮತ್ತು ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಪವಿತ್ರ ಜಲ ಸಿಂಪರಣೆ ಮಾಡಿ ಸಮಾಧಿಗಳನ್ನು ಆಶೀರ್ವದಿಸಿದರು. ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಿ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆಗೆ ಅಣಿಗೊಳಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕುಲಶೇಖರ ಚರ್ಚ್ ನ ಸಿಮೆಟರಿಯಲ್ಲಿ ನೂತನವಾಗಿ ಸ್ಥಾಪಿಸಿದ ಪವಿತ್ರ ಶಿಲುಬೆಯ ಆಶೀರ್ವಾದ ಕೂಡಾ ನೆರವೇರಿತು. ಮೂರೂ ಚರ್ಚ್ ಗಳ ಕ್ರೈಸ್ತರು ಭಾಗವಹಿಸಿದ್ದರು.












