ಇತ್ತೀಚಿನ ಸುದ್ದಿ
ಎಚ್ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ
13/08/2026, 22:20
ಬೆಂಗಳೂರು(reporterkarnataka.com): ಬಿಡದಿ ಜಾಗದ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ನಟ ಸಾರ್ವಭೌಮ’, ‘ನಾಟಕರತ್ನ’ ಎಂದು ಕರೆದಿರುವ ಅವರು, ಬಿಡದಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನಾಟಕಕ್ಕೆ ಹೋಲಿಕೆ ಮಾಡಿದ್ದಾರೆ.ಬಿಡದಿಯ 35 ಎಕರೆ ಜಾಗದ ವಿಚಾರ ಮುಂದಿಟ್ಟುಕೊಂಡು ಮಾತನಾಡಿದ ಪ್ರದೀಪ್ ಈಶ್ವರ್, ನಾಳೆಯಿಂದ ಸದನದಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಜೆಡಿಎಸ್ ನಾಯಕರು ವಿಷಯವನ್ನು ಪ್ರಸ್ತಾಪಿಸಲಿರುವ ಹಿನ್ನೆಲೆಯಲ್ಲಿ ಅದನ್ನು ನಾಟಕದ ರೂಪದಲ್ಲಿ ವ್ಯಂಗ್ಯವಾಗಿ ವಿವರಿಸಿದ್ದಾರೆ.
‘ನಾಳೆಯಿಂದ ಬಿಡದಿ ನಾಟಕ ಆರಂಭವಾಗಲಿದೆ. ನಾಟಕದ ಮುಖ್ಯ ಪಾತ್ರಧಾರಿ ಎಚ್.ಡಿ. ಕುಮಾರಸ್ವಾಮಿ. ಶಕುನಿ ಪಾತ್ರವನ್ನು ಆರ್. ಅಶೋಕ್ ನಿರ್ವಹಿಸಲಿದ್ದಾರೆ. ದುಶ್ಯಾಸನ ಪಾತ್ರಕ್ಕೆ ಎಂಎಲ್ಸಿ ರವಿಕುಮಾರ್ ಅಥವಾ ಛಲವಾದಿ ನಾರಾಯಣಸ್ವಾಮಿ ಬರಲಿದ್ದಾರೆ’ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ 35 ಎಕರೆ ಜಾಗದಲ್ಲೇ ಈ ‘ನಾಟಕ’ ನಡೆಯಲಿದೆ ಎಂದು ಹೇಳಿದ ಅವರು, ಬಿಡದಿ ವಿಚಾರವನ್ನು ರೋಚಕ ನಾಟಕದ ರೀತಿಯಲ್ಲಿ ಜನರ ಮುಂದೆ ಪ್ರಸ್ತುತಪಡಿಸಿದ್ದಾರೆ.
ಕುಮಾರಸ್ವಾಮಿ ಅವರ ಗಡಿಯಾರವನ್ನೂ ಪ್ರಸ್ತಾಪಿಸಿರುವ ಪ್ರದೀಪ್ ಈಶ್ವರ್, ‘ಸಮಯ ನನ್ನ ವಾಚ್ನಲ್ಲಿ 75 ಲಕ್ಷ ರೂಪಾಯಿ, ಕುಮಾರಣ್ಣನ ಸಿಂಪಲ್ ವಾಚ್ನಲ್ಲಿ ಸರಿಯಾಗಿ ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ. ನಾಟಕದ ಸಮಯವನ್ನು ಕುಮಾರಸ್ವಾಮಿ ಅವರೇ ನಿಗದಿ ಮಾಡಲಿ ಎಂದೂ ಟೀಕಿಸಿದ್ದಾರೆ.













