ಇತ್ತೀಚಿನ ಸುದ್ದಿ
Bangalore | ಶಿವಾಜಿನಗರ ಹಲ್ಲೆ ಕೇಸ್ ಪ್ರಮುಖ ಆರೋಪಿ ಅರೆಸ್ಟ್: ಹಲ್ಲೆಗೆ ಕಾರಣ ಏನು ಗೊತ್ತೇ?
22/07/2026, 16:31
ಬೆಂಗಳೂರು(reporterkarnataka.com): ಶಿವಾಜಿ ನಗರ ಫುಟ್ಪಾತ್ ತೆರವು ಮಾಡಲು ಹೋದ ಜಿಬಿಎ (GBA) ಅಧಿಕಾರಿಗಳ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಕೊನೆಗೂ ಅರೆಸ್ಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ಕಾರ್ಯಚರಣೆ ವೇಳೆ ಅಧಿಕಾರಿಗಳ ಮೇಲೆ ಗ್ಯಾಂಗ್ ಕಟ್ಟಿಕೊಂಡು ಹಲ್ಲೆ ನಡೆಸಿದ್ದ ಆರೋಪಿ ಬಸವರಾಜ್ನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಿಬಿಎ ಅಧಿಕಾರಿಗಳ ಮೇಲೆ ಗ್ಯಾಂಗ್ ಕಟ್ಟಿಕೊಂಡು ಹಲ್ಲೆ ಮಾಡಿದ್ದ ಆರೋಪಿ ಬಸವರಾಜ್ ಪರಾರಿಯಾಗಿದ್ದನು. ಬಳಿಕ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಗಲಾಟೆಯ ಬಗ್ಗೆ ಸ್ಪಷ್ಟನೆ ನೀಡಿದ್ದನು. ಆದ್ರೆ, ಫುಟ್ಪಾತ್ ತೆರವು ವಿಚಾರ ನಮ್ಮ ಗಲಾಟೆಯಲ್ಲ, ಕನ್ನಡ ಧ್ವಜ, ಗಣೇಶನ ದೇವಸ್ಥಾನ ಶಿವಾಜಿನಗರ ಬಸ್ ನಿಲ್ದಾಣದಲ್ಲಿತ್ತು. ಗಣೇಶನ ದೇವಸ್ಥಾನ ಒಡೆದುಹಾಕಿ, ಕನ್ನಡ ಬಾವುಟ ತೆಗೆದಾಕಿ ಎಂದು ಹೇಳುತ್ತಿದ್ದರು. ನಾನು ಹೋಗಿ ಕೇಳಿದಾಗ ಅವಾಚ್ಯ ನಿಂದಿಸಿದ್ರು, ಮೊದಲು ನನಗೆ ಬೈದ್ರು, ಈ ವಿಚಾರಕ್ಕೆ ಗಲಾಟೆ ಆಯ್ತು ಎಂದು ಆರೋಪಿ ಬಸವರಾಜ್ ಸ್ಪಷ್ಟನೆ ನೀಡಿದ್ದನು. ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದ ಬಸವರಾಜ್, ನಂತರ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು.
*ಆರೋಪಿಯನ್ನ ಹುಡುಕಿ ಅರೆಸ್ಟ್ ಮಾಡಿದ ಪೊಲೀಸರು*
ಘಟನೆ ನಂತರ ಎಸ್ಕೇಪ್ ಆಗಿದ್ದ ಪ್ರಮುಖ ಆರೋಪಿ ಬಸವರಾಜ್ನನ್ನು ಪೊಲೀಸರು ಹುಡುಕಿ ಅರೆಸ್ಟ್ ಮಾಡಿದ್ದಾರೆ. ನಾಳೆ ತಾನೇ ಬಂದು ಶರಣಾಗುವುದಾಗಿ ಬಸವರಾಜ್ ಪೊಲೀಸರ ಬಳಿ ಹೇಳಿದ್ದನಂತೆ, ಅಷ್ಟರಲ್ಲಿ ಬಸವರಾಜ್ ಇದ್ದ ಜಾಗಕ್ಕೆ ಹೋದ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಿದ್ದಾರೆ. ಇದೀಗ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯ ಬಂಧನವಾಗಿದ್ದು,ಜಿಬಿಎ ಅಧಿಕಾರ ಮೇಲಿನ ಹಲ್ಲೆ ಪ್ರಕರಣದಲ್ಲಿ ಇದುವರೆಗೂ ಸುಮಾರು 11 ಮಂದಿಯನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಅರೆಸ್ಟ್ ಮಾಡಿ ತನಿಖೆ ಮುಂದುವರಿಸಿದ್ದಾರೆ.











